ADVERTISEMENT

ಯಂತ್ರ ಖರೀದಿ ಸಹಾಯಧನ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 8:40 IST
Last Updated 7 ಜನವರಿ 2018, 8:40 IST

ವಿಜಯಪುರ: ರೇಷ್ಮೆ ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆ ನಿವಾರಣೆಗಾಗಿ ಯಂತ್ರಗಳ ಖರೀದಿಗಾಗಿ ಸರ್ಕಾರ ನೀಡುತ್ತಿರುವ ಸಹಾಯಧನದ ಪ್ರಮಾಣವನ್ನು ಶೇ 90 ಕ್ಕೆ ಏರಿಕೆ ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಮಂಡಿಬೆಲೆ ನಾರಾಯಣಸ್ವಾಮಿ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಷ್ಮೆ ಹಿಪ್ಪುನೇರಳೆ ಸೊಪ್ಪಿನ ಕಟಾವು ಮಾಡುವ ರೀಪರ್ ಯಂತ್ರದಿಂದ ಕೂಲಿಯಾಳುಗಳ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ. ರೇಷ್ಮೆ ಬೆಳೆಗಾರರಿಗೆ ಸಮಯ, ಹಣದ ಉಳಿತಾಯ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಯಲಿದೆ. ಈ ಕುರಿತು ಇಲಾಖೆಯ ಸಚಿವರೊಂದಿಗೆ ಚರ್ಚೆ ನಡೆಸಲಾಗಿದ್ದು ರೈತರ ಬೇಡಿಕೆಗೆ ಸ್ಪಂದಿಸಬೇಕು ಎಂದರು.

ಈ ರೀಪರ್ ಯಂತ್ರವನ್ನು ಕೇರಳ ಸರ್ಕಾರಿ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಅಲ್ಲಿ ಈ ಯಂತ್ರವನ್ನು ಗೋದಿ, ರಾಗಿ, ಭತ್ತ, ಜೋಳ, ಸೋಯಾ ಬೆಳೆ ಕತ್ತರಿಸಲು ಬಳಕೆ ಮಾಡಲಾಗುತ್ತಿದೆ. ಭತ್ತ ಮತ್ತು ಸಾದಲಿ ಸುತ್ತಮುತ್ತ ರಾಗಿ ಕಟಾವಿಗೆ ಬಳಸುತ್ತಿದ್ದಾರೆ. ಇದನ್ನು ಕೊಂಚ ಮಾರ್ಪಾಟು ಮಾಡಿದಲ್ಲಿ ರೇಷ್ಮೆ ಬೆಳೆಗಾರರ ಬಹುತೇಕ ಶ್ರಮ ಕಡಿಮೆಯಾಗುತ್ತದೆ ಎಂದರು.

ADVERTISEMENT

ಇಪ್ಪತ್ತು ಮಂದಿ ಕಾರ್ಮಿಕರು ಮಾಡಬೇಕಾದ ಕೆಲಸವನ್ನು ಒಬ್ಬ ವ್ಯಕ್ತಿ ಈ ಯಂತ್ರವನ್ನು ಬಳಸಿ ಮಾಡಬಹುದು. ನಾಲ್ಕನೇ ಜ್ವರದ ರೇಷ್ಮೆ ಹುಳುವಿಗೆ ಹಾಕಲು ಹಿಪ್ಪುನೇರಳೆ ಸೊಪ್ಪಿನ ದಪ್ಪಕಡ್ಡಿಗಳನ್ನು ಕತ್ತರಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಅಲ್ಲದೆ ಕೂಲಿ ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿರುವ ರೇಷ್ಮೆ ಬೆಳೆಗಾರರಿಗೆ ಇದು ವರದಾನವಾಗಲಿದೆ ಎಂದರು.

ರೈತ ಮುಖಂಡ ದೇವರಾಜಪ್ಪ ಮಾತನಾಡಿ, ₹ 1.99 ಕೋಟಿಯ ಈ ಯಂತ್ರಕ್ಕೆ ಈಗ ಕೃಷಿ ಇಲಾಖೆಯಿಂದ ₹ 48,500 ಸಹಾಯಧನ ಸಿಗುತ್ತಿದೆ. ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರು ಸಹಾಯಧನವನ್ನು ಶೇ 90ಕ್ಕೆ ಹೆಚ್ಚಿಸಲು ಒತ್ತಾಯಿಸಿದ್ದೇವೆ. ಸಿಗುವ ಆಶಾಭಾವನೆಯಿದೆ. ಸುಲಭವಾಗಿ ಬಳಸಬಹುದಾದ ಈ ಯಂತ್ರವನ್ನು ಹಿಪ್ಪುನೇರಳೆ ಕಟಾವಲ್ಲದೆ, ರಾಗಿ, ಜೋಳವನ್ನು ಕತ್ತರಿಸಲೂ ಬಳಕೆ ಮಾಡಿಕೊಳ್ಳಬಹುದು. ತಂತ್ರಜ್ಞಾನದ ಬಳಕೆ ಅವಶ್ಯಕತೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.