ADVERTISEMENT

ಹಾಲು ಸಂಗ್ರಹ ಹೆಚ್ಚಿಸಲು ಶೀತಲೀಕರಣ ಘಟಕ ಅಭಿವೃದ್ಧಿ–ಅಪ್ಪಯ್ಯಣ್ಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 8:38 IST
Last Updated 8 ಜನವರಿ 2018, 8:38 IST

ದೊಡ್ಡಬಳ್ಳಾಪುರ: ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿನ ಶೀತಲೀಕರಣ ಘಟಕಗಳಲ್ಲಿ ಹಾಲು ಸಂಗ್ರಹಣಾ ಸಾಮರ್ಥ್ಯ ಹೆಚ್ಚಳವಾದರೂ ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅವುಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಬಮೂಲ್‌ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ ಹೇಳಿದರು.

ಬೆಂಗಳೂರು ಹಾಲು ಒಕ್ಕೂಟದ ದೊಡ್ಡಬಳ್ಳಾಪುರ ಶಿಬಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 1.5 ಲಕ್ಷ ಲೀಟರ್ ಹಾಲಿನ ಶೀತಲೀಕರಣ ಘಟಕದಲ್ಲಿ ಹಮ್ಮಿಕೊಂಡಿದ್ದ ಹೋಮ, ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರ ಶಿಬಿರದ ಆವರಣದಲ್ಲಿ ಆಧುನಿಕ ತಂತ್ರಜ್ಞಾನ ಉಳ್ಳ ಶೀತಲೀಕರಣ ಘಟಕ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ 50 ವರ್ಷ ಹಳೆಯದಾದ ಶೀತಲೀಕರಣ ಘಟಕದ ಜಾಗದಲ್ಲಿ ಹೊಸ ಶೀತಲೀಕರಣ ಘಟಕ ನಿಮಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಎರಡೂ ಘಟಕದಿಂದ 2 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯವಿರುತ್ತದೆ. ಆವರಣದಲ್ಲಿ ಸಹಕಾರ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿರುವ ವಿ.ಕುರಿಯನ್, ಜಿ.ರಾಮೇಗೌಡ, ಎಂ.ವಿ.ಕೃಷ್ಣಪ್ಪ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದರು.

ಕನಕಪುರ ಸಮೀಪ ₹ 450 ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ಹಾಲು ಸಂಸ್ಕರಣೆ ಹಾಗೂ ಉಪ ಉತ್ಪನ್ನಗಳ ತಯಾರಿಕಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದು ಸಾಕಾರಗೊಂಡರೆ ರೈತರ ಹಾಲಿಗೆ ಉತ್ತಮ ಬೆಲೆ ಬರಲಿದೆ ಎಂದು ತಿಳಿಸಿದರು.

ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ, ದೊಡ್ಡಬಳ್ಳಾಪುರ ಶಿಬಿರದ ಉಪವ್ಯವಸ್ಥಾಪಕ ಡಾ.ಎಂ.ಶ್ರೀನಿವಾಸ್, ಡಾ.ಎಲ್.ಬಿ.ನಾಗರಾಜು, ನೌಕರರ ಸಂಘದ ರುದ್ರಪ್ಪ, ನಾರಾಯಣಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸುಬ್ಬರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.