ದೇವನಹಳ್ಳಿ: ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಸ್ಥಾನವನ್ನು ಗಳಿಸಿಕೊಂಡಿದ್ದ ಅಸಾಧಾರಣ ಪ್ರತಿಭೆಯುಳ್ಳ ನಟ ವಿಷ್ಣುವರ್ಧನ್ ಎಂದು ಡಾ.ವಿಷ್ಣು ಸೇವಾ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಟಿ.ಎಂ.ಸಹದೇವ್ ಹೇಳಿದರು.
ಇಲ್ಲಿನ ಅಣಿಘಟ್ಟ ಗ್ರಾಮದಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚಿತ್ರರಂಗದಲ್ಲಿ ಅನೇಕ ಗಣ್ಯರು ತಮ್ಮದೆ ಕಲಾ ಸೇವೆಯನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದ ಮೂಲಕ ಸಮಾನತೆ, ಸಾಮಾಜಿಕ ಕಳಕಳಿ, ಸೇವಾ ಮನೋಭಾವ, ಸಾಮಾನ್ಯ ಜನರ ಹೃದಯಕ್ಕೆ ಹತ್ತಿರವಾಗುವಂತೆ ಮಾಡಿದ್ದಾರೆ. ಚಿತ್ರರಂಗ ಹೊರತು ಅನೇಕ ಸೇವಾ ಕಾರ್ಯ ಮಾಡಿದ್ದಾರೆ. ಅವರ ಸೇವೆಯ ಸ್ಫೂರ್ತಿಯಿಂದ ನಾವು ಸಹ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಈ ನೆಲದಲ್ಲಿ ಹುಟ್ಟಿ ನಾಡು ನುಡಿಗಾಗಿ ಶ್ರಮಿಸಿದವರು ಒಂದು ಕ್ಷೇತ್ರಕ್ಕೆ ಸಿಮಿತವಾಗಿರಲಿಲ್ಲ. ನಾಡು ನುಡಿ ಕನ್ನಡ ಭಾಷೆ ಉಳಿಯ ಬೇಕಾದರೆ ಜವಾಬ್ದಾರಿಯಿಂದ ಸಂಘಟಿತರಾಗಬೇಕು. ಕನ್ನಡ ಭಾಷೆ ಇಂದು ಒಂದಿಷ್ಟು ಪರಂಪರೆಯಿಂದ ಉಳಿದಿದೆ ಎಂದರೆ ಗ್ರಾಮೀಣ ಪ್ರದೇಶದಿಂದ ಎಂಬುದನ್ನು ನಾವು ಆರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ವೈಜ್ಞಾನಿಕವಾಗಿ ಬೆಳವಣಿಗೆಯಾಗುತ್ತಿರುವ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಫತೆ, ಗುಣಮಟ್ಟದ ಕುಡಿಯುವ ನೀರು ರಕ್ಷಣೆಗೆ ಒತ್ತು ನೀಡಬೇಕು. ಪ್ರತಿಯೊಂದು ಕುಟುಂಬದ ಮಕ್ಕಳು ಶಿಕ್ಷಣ ಪಡೆಯಬೇಕು. ಗುರುಹಿರಿಯರಿಗೆ ಗೌರವ ನೀಡುವುದನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು’ ಎಂದು ಹೇಳಿದರು.
ಕ್ಷೇಮಾಭಿವೃದ್ಧಿ ಸಂಘ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್, ಇತಿಹಾಸ ಸಂಶೋಧಕ ಗುರುಸಿದ್ಧಯ್ಯ, ಮುಖಂಡ ವಿನೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.