ದೇವನಹಳ್ಳಿ: ‘ಮಹಿಳೆಯರು ಸ್ವಾವಲಂಬಿಗಳಾಗಬೇಕು. ಆರ್ಥಿಕ ಅಭಿವೃದ್ಧಿ ಸಾಧಿಸಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಅಖಿಲ ಕರ್ನಾಟಕ ಮಹಿಳಾ ಅಭಿವೃದ್ಧಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷೆ ಎನ್. ಶ್ರೀಲಕ್ಷ್ಮೀ ತಿಳಿಸಿದರು.
ಪಟ್ಟಣದ 6ನೇ ವಾರ್ಡಿನ ಗಾಣಿಗರ ಬೀದಿಯಲ್ಲಿ ಅಖಿಲ ಕರ್ನಾಟಕ ಮಹಿಳಾ ಅಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ನೂತನ ಮಹಿಳಾ ಸದಸ್ಯರ ಕಾರ್ಯಕಾರಿ ಸಮಿತಿಯ ರಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸಮಾಜಕ್ಕೆ ತಮ್ಮ ಶಕ್ತಿ ತೋರಿಸಬೇಕು. ಕಾನೂನು ಎಲ್ಲರಿಗೂ ಅವಶ್ಯಕವಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತವೆ. ಆಗ ನ್ಯಾಯಾಲಯದ ಮೂಲಕ ಆರ್ಥಿಕ ಪರಿಹಾರ, ರಕ್ಷಣಾ ಆದೇಶ, ವಾಸದ ಆದೇಶ, ಮಕ್ಕಳ ವಶ, ತಾತ್ಕಾಲಿಕ ಆಶ್ರಯ, ವೈದ್ಯಕೀಯ ಹಾಗೂ ಕಾನೂನು ನೆರವು ಒದಗಿಸಲು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಹಾಗೂ ನಿಯಮ 2006 ಅನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷೆ ಬಿ. ಶ್ಯಾಮಲಾ ಮಾತನಾಡಿ, ಹೊಸಕೋಟೆಯಲ್ಲಿ ಈ ಸಂಸ್ಥೆ ಪ್ರಾರಂಭಿಸಿ ಒಂದು ವರ್ಷ ಕಳೆದಿದೆ. ಅಂಗ ಸಂಸ್ಥೆಗಳನ್ನು ಎಲ್ಲಾ ಕಡೆಗಳಲ್ಲಿ ತೆರೆಯುವ ಉದ್ದೇಶದಿಂದ ಪ್ರತಿಯೊಬ್ಬ ಮಹಿಳೆಯರನ್ನು ಸ್ವಾಗತಿಸುತ್ತಿರುವ ಸಂಸ್ಥೆಯಾಗಿದೆ ಎಂದರು.
ಹೆಣ್ಣುಮಕ್ಕಳು ಸದೃಢ ಸಮಾಜಕ್ಕೆ ಯಾರ ಮೇಲೂ ಅವಲಂಬಿಸದೇ ಸ್ವಂತ ದುಡಿಮೆಯಿಂದ ಸ್ವತಂತ್ರವಾಗಿ ಬದುಕು ನಡೆಸಬೇಕು. ಪುರುಷರಿಗೆ ಅವಲಂಬಿಸದೆ ಅವರ ಸರಿಸಮಾನರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸಲಹೆ ನೀಡಿದರು.
ನೂತನ ಕಾರ್ಯಕಾರಿ ಸಮಿತಿಯಲ್ಲಿ ನೂತನ ಜಿಲ್ಲಾ ಅಧ್ಯಕ್ಷರಾಗಿ ಕೃಷ್ಣವೇಣಿ ಎಂ., ಕಾರ್ಯಾಧ್ಯಕ್ಷೆ ಮೀನಾಕ್ಷಿ, ತಾಲ್ಲೂಕು ಅಧ್ಯಕ್ಷೆ ಆರ್. ಪುನೀತಾ, ಉಪಾಧ್ಯಕ್ಷೆ ಛಾಯದೇವಿ, ಪ್ರಧಾನ ಕಾರ್ಯದರ್ಶಿ ಮೇಘನಾ, ಗೌರವಾಧ್ಯಕ್ಷೆ ಚೌಡಮ್ಮ, ಕಾರ್ಯದರ್ಶಿ ಆನಂದಮ್ಮ, ಖಜಾಂಚಿ ಡಿ. ಗೌತಮಿ, ಕಾರ್ಯಕಾರಿ ಸದಸ್ಯರಾದ ಸಾರಿಕಾ, ನಯನಾ, ಗಾಯಿತ್ರಿ, ಗೀತಾ, ಗಾಯಿತ್ರಮ್ಮ, ಕಾಂತಮಣಿ, ರಾಜಶ್ರೀ, ಶ್ವೇತಾ ಅವರಿಗೆ ಆದೇಶ ಪತ್ರ ವಿತರಿಸಲಾಯಿತು.
ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮಾ, ಖಜಾಂಚಿ ವರಲಕ್ಷ್ಮೀ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳುಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.