ದೊಡ್ಡಬಳ್ಳಾಪುರ: ಸ್ನಾತಕ, ಸ್ನಾತಕೋತ್ತರ ಪದವಿಗಳೇ ಜೀವನದಲ್ಲಿ ಮುಖ್ಯವಲ್ಲ, ಬದುಕಿನಲ್ಲಿ ಸಂಸ್ಕಾರ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಏನಾಗಬೇಕು ಎಂದು ಯೋಚಿಸಬೇಕು ಎಂದು ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಸಂಗಪ್ಪಉಪಾಸೆ ಹೇಳಿದರು.
ನಗರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಶ್ರೀದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವ ಮನಸ್ಸುಗಳು ಪಾಠ ಪ್ರವಚನ ಕಡೆ ಗಮನ ಹರಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ತೋರಬೇಕು. ವಿದ್ಯಾರ್ಥಿಗಳು ಹೆತ್ತವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಕೆಡುತ್ತಿರುವ ಸಮಾಜದಲ್ಲಿ ತಾವೂ ಅದೇ ಹಾದಿಯಲ್ಲಿ ನಡೆದು ಪೋಷಕರ ಕನಸನ್ನು ಭಗ್ನಗೊಳಿಸಬಾರದು.ಆಗ ಮಾತ್ರ ಶಿಕ್ಷಣದ ನೈಜ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.
ದೇವರಾಜ ಅರಸು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ವಿದ್ಯಾರ್ಥಿಗಳು ಒಂದೇ ವಿಚಾರಕ್ಕೆ ಸೀಮಿತಗೊಳ್ಳದೆ ಕಲಿಕೆಯ ಮಾರ್ಗಗಳನ್ನು ವಿಸ್ತರಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ಕೃಷ್ಟ ದೇಶ ಪ್ರೇಮಿಯಾಗಬೇಕು ಎಂದರು.
ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಜೆ.ಆರ್.ರಾಕೇಶ್, ಎನ್.ಉತ್ತಮ್ ಕುಮಾರ್, ಡಿ.ವಿದ್ವತ್, ಕಾಲೇಜಿನ ಪ್ರಾಂಶುಪಾಲ ಡಾ.ಆರ್.ನಾಗರಾಜ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ಆರ್ಎಲ್ಜೆಐಟಿ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ನರಸಿಂಹರೆಡ್ಡಿ, ವಿಭಾಗದ ಮುಖ್ಯಸ್ಥರಾದ ಗೌರಪ್ಪ, ಸಿ.ಪಿ.ಪ್ರಕಾಶ್, ಪಿ.ಚೈತ್ರ, ಲಕ್ಷ್ಮೀಶ, ತಾವರೇನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.