ADVERTISEMENT

ಆನೇಕಲ್: ಮಾಯಸಂದ್ರದಲ್ಲಿ ವೈಭವದ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 13:39 IST
Last Updated 11 ಏಪ್ರಿಲ್ 2025, 13:39 IST
ಆನೇಕಲ್ ತಾಲ್ಲೂಕಿನ ಮಾಯಸಂದ್ರದ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು
ಆನೇಕಲ್ ತಾಲ್ಲೂಕಿನ ಮಾಯಸಂದ್ರದ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು   

ಆನೇಕಲ್: ತಾಲ್ಲೂಕಿನ ಮಾಯಸಂದ್ರದ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವ ಗುರುವಾರ ರಾತ್ರಿ ವೈಭವದಿಂದ ನಡೆಯಿತು.

ಸುತ್ತಮುತ್ತಲ ಗ್ರಾಮಗಳ ಭಕ್ತರು ವೈಭವದ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು. ಪಲ್ಲಕ್ಕಿ ಉತ್ಸವ, ಭಾರಿ ಜನಸ್ತೋಮ ಕರಗದ ಆಕರ್ಷಣೆಯಾಗಿತ್ತು. ಮಾಯಸಂದ್ರದ 181ನೇ ವರ್ಷದ ಕರಗ ಮಹೋತ್ಸವ ಇದಾಗಿತ್ತು.

ಗುರುವಾರ ಮಧ್ಯರಾತ್ರಿ 2.45ರ ಸುಮಾರಿಗೆ ಕರಗ ಹೊತ್ತ ವೆಂಕಟೇಶ್‌ ಅವರು ಧರ್ಮರಾಯಸ್ವಾಮಿ ದೇವಾಲಯದಿಂದ ಹೊರ ಬಂದರು. ವೀರಕುಮಾರರು ಢಿಕ್‌ ಡೀ, ಗೋವಿಂದ ಗೋವಿಂದ ಎಂದು ಜಯಘೋಷ ಮಾಡುತ್ತಾ ಕರಗ ಬರಮಾಡಿಕೊಂಡರು. ಮೊಣಕಾಲಿನಲ್ಲಿ ದೇವಾಲಯದಿಂದ ಕರಗ ಹೊರ ಬರುತ್ತಿದ್ದಂತೆ ಭಕ್ತರು ಜಯಘೋಷ ಮೂಲಕ ಕರಗಕ್ಕೆ ಸ್ವಾಗತ ಕೋರಿದರು.

ADVERTISEMENT

ಕರಗ ಕಣ್ತುಂಬಿಕೊಳ್ಳಲು ಮಾಯಸಂದ್ರದ ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗ ನೂರಾರು ಮಂದಿ ಭಕ್ತರ ಜಮಾಯಿಸಿದ್ದರು. ವಿವಿಧ ಗ್ರಾಮಗಳ ಭಕ್ತರು ಕರಗವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಆನೇಕಲ್‌, ಹಾರೋಹಳ್ಳಿ, ಹಳೇಹಳ್ಳಿ, ಶೆಟ್ಟಿಹಳ್ಳಿ, ಬಂಡಾಪುರ, ಅತ್ತಿಬೆಲೆ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಮಾಯಸಂದ್ರದಲ್ಲಿ ಜಮಾಯಿಸಿದ್ದರು.

ಮಾಯಸಂದ್ರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡವನ್ನು ಕರಗ ಹೊತ್ತ ವೆಂಕಟೇಶ್‌ ಪ್ರವೇಶಿಸಿದರು. ನಾದಸ್ವರ, ಡೋಲು, ತಮಟೆಯ ವಾದನಕ್ಕೆ ತಕ್ಕಂತೆ ವೆಂಕಟೇಶ್‌ ಅವರು ಹೆಜ್ಜೆ ಹಾಕಿ ಮುಂದೆ ಮುಂದೆ ಸಾಗಿದರು.

ದೇವಾಲಯ ಮುಂಭಾಗದ ವಿಶಾಲ ಬಯಲಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಆಕರ್ಷಕ ಕರಗ ನೃತ್ಯ ಪ್ರದರ್ಶನ ನಡೆಯಿತು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಸಾಗಿತು. ಮನೆ ಮನೆಗಳಲ್ಲಿ ಕರಗಕ್ಕೆ ಮಡಿಲು ತುಂಬಿ ದೇವಿಯನ್ನು ಬರಮಾಡಿಕೊಂಡರು. ಕರಗದತ್ತ ಮಲ್ಲಿಗೆ ಹೂ ಮಳೆಗರೆಯಲಾಯಿತು. ಮನೆ ಮನೆಗಳ ಮುಂದೆ ಕರಗವು ಬರುತ್ತಿದ್ದಂತೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಮಾಯಸಂದ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಸಂಚರಿಸಿತು. ಪಿಳ್ಳಪ್ಪ ಸ್ವಾಮಿ ಆಶ್ರಮದ ಬಳಿ ಕರಗವು ವೈಭವದ ನೃತ್ಯ ಪ್ರದರ್ಶನ ನೀಡಿತು.

ಗ್ರಾಮ ದೇವತೆಗಳ 20ಕ್ಕೂ ಹೆಚ್ಚು ಪಲ್ಲಕ್ಕಿ ಉತ್ಸವ ನಡೆಯಿತು. ಶುಕ್ರವಾರ ಮುಂಜಾನೆ 6ರ ವೇಳೆಗೆ ಕರಗ ದೇವಾಲಯಕ್ಕೆ ಮರಳಿತು.

ಶುಕ್ರವಾರ ಬೆಳಗಿನ ಜಾವ 5ರ ಸುಮಾರಿನಲ್ಲಿಯೂ ರಸ್ತೆ ದಟ್ಟಣೆ ಉಂಟಾಗಿತ್ತು. ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಭಕ್ತರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟರು.

ಕರಗ ಮಹೋತ್ಸವದ ಅಂಗವಾಗಿ ದ್ರೌಪದಿ ದೇವಿ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು. ವೀರ ವಸಂತರಾಯ(ಬಲಿರಾಮ) ಪ್ರತಿಷ್ಠಾಪನೆಯಾಗಿದ್ದು, ಶನಿವಾರ ಸಂಜೆ ಕೋಟೆ ಜಗಳ ನಡೆಯಲಿದೆ. ಕೋಟೆಜಗಳಲ್ಲಿ ವೀರವಸಂತರಾಯನ ಶಿರಚ್ಛೇದನ ನಡೆಯಲಿದೆ.

ಅಲಗು ಸೇವೆ ಮೂಲಕ ಕರಗ ಸ್ವಾಗತಿಸಿದ ವೀರಕುಮಾರರು
ಆನೇಕಲ್ ತಾಲ್ಲೂಕಿನ ಮಾಯಸಂದ್ರ ಕರಗವನ್ನು ವೀಕ್ಷಿಸಲು ಆಗಮಿದ್ದ ಭಾರಿ ಜನಸ್ತೋಮ

Cut-off box - ಗಮನ ಸೆಳೆದ ಮೋಡಿ ರಾಗ ಮಾಯಸಂದ್ರ ಕರಗದ ಪ್ರಮುಖ ಆಕರ್ಷಣೆ ನಾದಸ್ವರ ಮತ್ತು ಡೋಲು ಕಲಾವಿದರ ತಾಳಕ್ಕೆ ತಕ್ಕಂತೆ ಕರಗವು ಹೆಜ್ಜೆ ಹಾಕಿತು. ಚೆಲ್ಲಿದರೂ ಮಲ್ಲಿಗೆಯ ಯಾರೇ ಅಮ್ಮ ಕರಗ ಹೊರುವವರು ಎಂಬ ಡೋಲಿನ ನಾದಕ್ಕೆ ಕರಗವು ಹೆಜ್ಜೆ ಹಾಕಿತು. ಮೋಡಿ ರಾಗವು ಭಕ್ತರ ಕಣ್ಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.