ADVERTISEMENT

ಆನೇಕಲ್ | ಜಿಂಕೆ ಬೇಟೆ ಜಾಲ ಪತ್ತೆ: 74 ಕೆ.ಜಿ ಜಿಂಕೆ ಮಾಂಸ, ಚರ್ಮ ವಶ

ಕಾರಿನಲ್ಲಿ ನಾಲ್ಕು ಜಿಂಕೆ, ಕಾಡು ಹಂದಿ ದೇಹ ಪತ್ತೆ * ಒಬ್ಬನ ಬಂಧನ; ಪರಾರಿಯಾದ ಸೂತ್ರಧಾರ* ನಾಲ್ವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 20:12 IST
Last Updated 29 ಜೂನ್ 2025, 20:12 IST
ಆನೇಕಲ್ ತಾಲ್ಲೂಕಿನ ಸಿ.ಕೆ.ಪಾಳ್ಯ ಶೆಡ್‌ನಿಂದ ವಶಪಡಿಸಿಕೊಳ್ಳಲಾದ ಜಿಂಕೆ ಮತ್ತು ಕಾಡಂದಿಗಳ ಮಾಂಸ, ಜಿಂಕೆ ಚರ್ಮ ಮತ್ತು ಆರೋಪಿ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳು 
ಆನೇಕಲ್ ತಾಲ್ಲೂಕಿನ ಸಿ.ಕೆ.ಪಾಳ್ಯ ಶೆಡ್‌ನಿಂದ ವಶಪಡಿಸಿಕೊಳ್ಳಲಾದ ಜಿಂಕೆ ಮತ್ತು ಕಾಡಂದಿಗಳ ಮಾಂಸ, ಜಿಂಕೆ ಚರ್ಮ ಮತ್ತು ಆರೋಪಿ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳು    

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಚುಕ್ಕಿ ಜಿಂಕೆಗಳು ಮತ್ತು ಕಾಡು ಹಂದಿಗಳನ್ನು ಬೇಟೆಯಾಡಿ ಅವುಗಳ ಮಾಂಸ, ಚರ್ಮ, ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಭೇದಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಬನ್ನೇರುಘಟ್ಟ ನೈಸ್‌ ರಸ್ತೆಯ ಜಂಕ್ಷನ್‌ ಬಳಿ ಭಾನುವಾರ ಬೆಳಗ್ಗೆ ವಾಹನ ತಪಾಸಣೆ ನಡೆಸುತ್ತಿದ್ದ ಅರಣ್ಯ ಅಧಿಕಾರಿಗಳಿಗೆ ಕಾರೊಂದರಲ್ಲಿ ಸಾಗಿಸುತ್ತಿದ್ದ ನಾಲ್ಕು ಮೃತ ಚುಕ್ಕಿ ಜಿಂಕೆ, ಒಂದು ಮೃತ ಕಾಡುಹಂದಿ ಕಳೆಬರ ಪತ್ತೆಯಾಗಿವೆ. 

ಕಾರು ಚಾಲಕ ಪ್ರತಾಪ್‌(31) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸಿ.ಕೆ. ಪಾಳ್ಯದಲ್ಲಿರುವ ಶೆಡ್‌ನಲ್ಲಿ ಜಿಂಕೆ ಮಾಂಸ, ಚರ್ಮ ಸಂಗ್ರಹಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ.

ADVERTISEMENT

ಆರೋಪಿ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಿ.ಕೆ.ಪಾಳ್ಯ ಶೆಡ್‌ ಮೇಲೆ ದಾಳಿ ಮಾಡಿದಾಗ 74 ಕೆ.ಜಿ ಜಿಂಕೆ ಮಾಂಸ, ಆರು ಚುಕ್ಕೆ ಜಿಂಕೆಗಳ ಚರ್ಮ, ಬೇಟೆಗೆ ಬಳಸುತ್ತಿದ್ದ ಒಂದು ಸಿಂಗಲ್‌ ಬ್ಯಾರೆಲ್‌ ಹಾಗೂ ಒಂದು ಡಬಲ್‌ ಬ್ಯಾರೆಲ್‌ ಗನ್‌, ಹತ್ತು ಗುಂಡು, ಎರಡು ಕಾರು, ಬೈಕ್‌, ಮಾಂಸ ತೂಗುವ ತೂಕದ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.

ಜಿಂಕೆ ಮತ್ತು ಕಾಡು ಹಂದಿ ಮರಣೋತ್ತರ ಪರೀಕ್ಷೆ ನಡೆಸಿ, ಮಾದರಿ ಸಂಗ್ರಹಿಸಲಾಗಿದೆ. ಈ ದಂಧೆಯ ಪ್ರಮುಖ ಸೂತ್ರಧಾರ ಬಾಲರಾಜು, ಸಿ.ಕೆ. ಪಾಳ್ಯಾದ ಶೆಡ್‌ ಜಾಗದ ಮಾಲೀಕ ಭೀಮಪ್ಪ, ಶೇಡ್‌ ನಿರ್ವಹಣೆ ಮಾಡುತ್ತಿದ್ದ ರಮೇಶ್‌, ಬೈಕ್‌ ಮಾಲೀಕ ಫಿಲಿಪ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಾಲ್ವರೂ ಪರಾರಿಯಾಗಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ವಿ. ಗಣೇಶ್‌ ತಿಳಿಸಿದರು. 

ವಶಪಡಿಸಿಕೊಂಡ ಒಂದು ಕಾರು ಪ್ರತಾಪ್‌ನಿಗೆ, ಮತ್ತೊಂದು ಕಾರು ಬಾಲರಾಜುಗೆ ಸೇರಿದೆ. ಬೈಕ್‌ ಫಿಲಿಪ್‌ ಎಂಬಾತನಿಗೆ ಸೇರಿದೆ. ತನಿಖೆ ಮುಂದುವರೆದಿದೆ.  

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಚುಕ್ಕಿ ಜಿಂಕೆಗಳು ಹೆಚ್ಚಾಗಿವೆ. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಅವುಗಳ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ರವೀಂದ್ರ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಗಣೇಶ್‌, ವಲಯ ಅರಣ್ಯಾಧಿಕಾರಿ ಎನ್‌.ಆರ್‌.ಕಾಂಬ್ಳೆ, ಉಪ ವಲಯ ಅರಣ್ಯಾಧಿಕಾರಿಗಳಾದ ಚಿದಾನಂದ್, ಶಿವರಾಜ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.