ಆನೇಕಲ್: ತಾಲ್ಲೂಕಿನ ಜೈಭೀಮ್ ಐಕ್ಯತಾ ವೇದಿಕೆಯಿಂದ ಭೀಮಾ ಕೋರೆಗಾಂವ್ ಗೌರವಾರ್ಥ ಜನವರಿ 1ರಂದು ಪಥಸಂಚಲನ ಮತ್ತು ಇಂಡ್ಲವಾಡಿ ಕ್ರಾಸ್ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಆನಂದ ಚಕ್ರವರ್ತಿ ತಿಳಿಸಿದರು.
ಕಾರ್ಯಕ್ರಮದ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶೋಷಣೆ ಮತ್ತು ಅಸಮಾನತೆ ವಿರುದ್ಧ ಹೋರಾಟ ಮಾಡಿ 500ಮಂದಿ ಮಹರ್ ಸೈನಿಕರು ಜಯಗಳಿಸಿದ ನೆನಪಿನ ಭೀಮಾಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ಯುವಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲ್ಲೂಕಿನ ಆರು ಕಡೆ ವೇದಿಕೆ ವತಿಯಿಂದ ಅಂಬೇಡ್ಕರ್ ಚಿಂತನಾ ಶಾಲೆ ಪ್ರಾರಂಭಿಸಲಾಗುವುದು. ಗೌರೇನಹಳ್ಳಿ, ಸುರಗಜಕ್ಕನಹಳ್ಳಿ, ಸೊಪ್ಪಹಳ್ಳಿ, ರಾಜಾಪುರ, ಹಿನ್ನಕ್ಕಿ,ನಾಗನಾಯಕನಹಳ್ಳಿಗಳಲ್ಲಿ ಚಿಂತನಾ ಶಾಲೆ ತೆರೆದು ಅಂಬೇಡ್ಕರ್ ವಿಚಾರಗಳ ಬಗ್ಗೆ ಚರ್ಚೆ, ಸಂವಾದ ನಡೆಸಲಾಗುವುದು ಎಂದರು.
ಅಂಬೇಡ್ಕರ್ ಲಾ ಕ್ಲಿನಿಕ್ ಜಿಗಣಿಯಲ್ಲಿ ತೆರೆಯಲಾಗುತ್ತಿದ್ದು ಈ ಮೂಲಕ ಜನರಿಗೆ ಕಾನೂನಿನ ಅರಿವು-ನೆರವು ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ ಜನವರಿ 1ರಂದು ಚಾಲನೆ ನೀಡಲಾಗುವುದು. ತಾಲ್ಲೂಕಿನ ಹೆನ್ನಾಗರ ಹೊಸಹಳ್ಳಿಯಲ್ಲಿ ಕ್ರೀಡಾ ಕ್ಲಬ್ ತೆರೆಯಲಾಗುವುದು. ಭೀಮಾಕೋರೆಗಾಂವ್ ಸ್ಮರಣಾರ್ಥ ಯುವಕರಲ್ಲಿ ಮಾರ್ಗದರ್ಶನ, ಸಂವಾದ ಮೂಲಕ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಂಗಾಣಗಳಿಂದ ಈ ವಿಜಯೋತ್ಸವದಲ್ಲಿ ಸಮತಾ ಸೈನಿಕರು ಪಾಲ್ಗೊಳ್ಳಲಿದ್ದಾರೆ. ತಮಿಳು ನಿರ್ದೇಶಕ ಪಾ.ರಂಜಿತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಸಿ.ರಾವಣ, ವೆಂಕಟೇಶ್ಮೂರ್ತಿ, ಜಿಗಣಿ ವಿನೋದ್, ಮುನಿರಾಮು, ಯಡವನಹಳ್ಳಿ ಕೃಷ್ಣಪ್ಪ, ಉದಯ್, ಗೌತಮ್, ಲೋಕೇಶ್, ರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.