ಆನೇಕಲ್: ಪಟ್ಟಣದ ಜೀವನಾಡಿಯಾಗಿದ್ದ ದೊಡ್ಡ ಕೆರೆ ಮಾಲಿನ್ಯದಿಂದ ತುಂಬಿದ್ದು ಚರಂಡಿ ನೀರು ಶುದ್ಧೀಕರಣವಾಗದೆ ಕೆರೆಯತ್ತ ಹರಿಯುತ್ತಿದೆ. ಕಲುಷಿತಗೊಂಡಿರುವ ಕೆರೆಯಲ್ಲಿ ಕೊಳಚೆ ತುಂಬಿದೆ. ಇದರಿಂದಾಗಿ ಪಟ್ಟಣದ ಪುರಾತನ ಕೆರೆ ಅವಸಾನದ ಅಂಚಿನತ್ತ ಸಾಗಿದೆ.
ಆನೇಕಲ್ ದೊಡ್ಡಕೆರೆಯು ಸುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲದ ಜೀವಸೆಲೆಯಾಗಿತ್ತು. ಆದರೆ, ಮಳೆ ಕೊರತೆಯಿಂದ ತುಂಬುತ್ತಿಲ್ಲ. ಉತ್ತಮ ಮಳೆಯಾದರೂ ಕೆರೆಯ ಜಲ ಮೂಲಗಳು ಮುಚ್ಚಿಹೋಗಿವೆ. ಪುರಾತನ ಕೆರೆ ನೀರಿನ ಮೂಲಗಳ ಪುನಶ್ಚೇತನ ಮಾಡಿ ಕೆರೆ ಅಭಿವೃದ್ಧಿಪಡಿಸುವ ಅವಶ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ದೊಡ್ಡಕೆರೆಯ ಗೌರೇನಹಳ್ಳಿ ಹಾಗೂ ಬಾಡರಹಳ್ಳಿ ಕಡೆ ಕಸದ ರಾಶಿ ತಂದು ಸುರಿಯಲಾಗುತ್ತಿದೆ. ಒಂದೆಡೆ ಚರಂಡಿ ನೀರು, ಮತ್ತೊಂದೆಡೆ ಪಟ್ಟಣದ ಕಸದಿಂದಾಗಿ ಗಬ್ಬು ನಾರುತ್ತಿದೆ. ಕೆರೆ ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಬೇಕಾಗಿದೆ. ಕೊಳಚೆ ನೀರು ಕೆರೆಗೆ ಬಾರದಂತೆ ಕೂಡಲೇ ತ್ಯಾಜ್ಯ ಸಂಸ್ಕರಣ ಘಟಕ (ಎಸ್ಟಿಪಿ) ನಿರ್ಮಿಸಬೇಕು ಹಾಗೂ ಕೆರೆಯಲ್ಲಿ ಕಸ ಹಾಕುವುದನ್ನು ನಿಲ್ಲಿಸಲು ಸ್ಥಳೀಯರ ಆಗ್ರಹವಾಗಿದೆ.
ಇತ್ತೀಚೆಗೆ ತಾಲ್ಲೂಕಿನ ಜಿಗಣಿ ಭಾಗದಲ್ಲಿ ಹಲವು ಕೈಗಾರಿಕೆಗಳು ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದು ಅವಸಾನದ ಅಂಚಿನಲ್ಲಿದ್ದ ಕೆರೆಗಳು ಮರು ಜೀವ ಪಡೆದಿವೆ. ಈ ಕೆರೆಗೂ ಮರು ಜೀವ ನೀಡಲು ಜನಪ್ರತಿನಿಧಿಗಳು ಶ್ರಮಿಸಬೇಕಾಗಿದೆ. ಕೆರೆ ಏರಿಯ ಮೂಲಕ ಆನೇಕಲ್–ಜಿಗಣಿ–ಬನ್ನೇರುಘಟ್ಟ ರಸ್ತೆ ಹಾದು ಹೋಗುತ್ತದೆ. ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಕೆರೆ ಏರಿಯ ಇಕ್ಕೆಲಗಳಲ್ಲಿ ಯಾವುದೇ ತಡೆ ಗೋಡೆಗಳಿಲ್ಲದೇ ಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿ ತಡೆ ಗೋಡೆ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.