ದೇವನಹಳ್ಳಿ: ‘ವೀರಶೈವ ಲಿಂಗಾಯತ ಸಮುದಾಯ ಸಂಘಟನಾತ್ಮಕವಾಗಿ ಅಭಿವೃದ್ಧಿಯಾಗಬೇಕಿದೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಸಿ.ವಿರೂಪಾಕ್ಷಯ್ಯ ಹೇಳಿದರು.
ಇಲ್ಲಿನ ತಾಲ್ಲೂಕು ವೀರಶೈವ ಲಿಂಗಾಯತ ಆಡಳಿತ ಕಚೇರಿಯಲ್ಲಿ ಸಮುದಾಯದ ತ್ರೈಮಾಸಿಕ ಸಭೆ ಮತ್ತು 2020ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ ಎಂದು ಲಿಂಗಾಯತ ಮುಖಂಡ ಜ್ಯೋತಿ ಪ್ರಕಾಶ ಮಿರ್ಜಿ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳನ್ನು ಆರಂಭಿಸಲಾಯಿತು. ಆ ಮೂಲಕ ಸಂಘಟಿತರಾಗುವಂತೆ ಮನವಿ ಮಾಡಲಾಯಿತು. ಇನ್ನಷ್ಟು ಶಕ್ತಿಯುತವಾಗಲು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.
ತಾಲ್ಲೂಕು ಸಂಘ ಅಧ್ಯಕ್ಷ ಎಂ.ಎಸ್.ರಮೇಶ್ ಮತ್ತು ಪುರಸಭೆ ಸದಸ್ಯ ಕೋಡಿಮಂಚೇನಹಳ್ಳಿ ನಾಗೇಶ್ ಮಾತನಾಡಿ, ‘ವೀರಶೈವ ಲಿಂಗಾಯತ ಸಮುದಾಯಕ್ಕೆ ಸಮಾನತೆಯ ಹರಿಕಾರ ಬಸವಣ್ಣ ಎಷ್ಟು ಮುಖ್ಯವೋ ತ್ರಿದಾಸೋಹ ಸ್ಥಾಪಿತ ಸರ್ವಶ್ರೇಷ್ಠ ಪರಮಪೂಜ್ಯ ದಿ.ಶ್ರೀ ಶಿವಕುಮಾರಸ್ವಾಮಿ ಪ್ರಮುಖ ಆರಾಧ್ಯ ದೈವ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಮಹನೀಯರ ಜೀವನ ಚರಿತ್ರೆ, ವ್ಯಕ್ತಿತ್ವ, ದೂರದೃಷ್ಟಿ, ಚಿಂತನೆ, ಸಾಮಾಜಿಕ ಸೇವೆಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಅವರ ತತ್ವ, ಸಿದ್ಧಾಂತ, ಅದರ್ಶಗಳನ್ನು ಪ್ರತಿಯೊಬ್ಬರು ಅಳವಡಿಕೊಂಡಾಗ ಜೀವನ ಸಾರ್ಥಕ’ ಎಂದು ಹೇಳಿದರು.
‘ಸಮುದಾಯದಲ್ಲಿನ ಪರಂಪರೆ, ಅಚಾರ, ವಿಚಾರಗಳನ್ನು ತಪ್ಪದೇ ಪಾಲಿಸಬೇಕು. ಮೂಢನಂಬಿಕೆ ಬಗ್ಗೆ ಜಾಗೃತಿ ವಹಿಸಬೇಕು. ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಸಂಘದಿಂದ ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಹೇಳಿದರು.
ವೀರಶೈವ ಮಹಾಸಭಾ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಎಸ್.ವಿರೂಪಾಕ್ಷಯ್ಯ ನಿರ್ದೇಶಕ ಶಾಂತಮೂರ್ತಿ, ತಾಲ್ಲೂಕು ಘಟಕ ಉಪಾಧ್ಯಕ್ಷ ಆರ್.ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಎಸ್.ವಿಜಯ ಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ನಳಿನಾ, ಪ್ರಧಾನ ಕಾರ್ಯದರ್ಶಿ ಮಮತ, ಕಾರ್ಯದರ್ಶಿ ಸವಿತಾ, ಕೆ.ಸದಾಶಿವಯ್ಯ , ಬಿ.ಎನ್.ಶಿವಪ್ರಸಾದ್, ಎಂ.ಕುಮಾರ್, ಟಿ.ಸಿ ಉಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.