ವಿಜಯಪುರ(ದೇವನಹಳ್ಳಿ): ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದಲ್ಲಿರುವ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠಕ್ಕೆ ಬುಧವಾರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದರು.
ತಿಗಳ ಸಮುದಾಯದ ಸ್ವಾಮೀಜಿ, ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಮಂಜುನಾಥ್ ಮಹಾರಾಜ್ ಹಾಗೂ ಸಮುದಾಯ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ವಹ್ನಿಕುಲ ತಿಗಳ ಸಮುದಾಯದ ಮುಖಂಡರ ಸಭೆಯಲ್ಲಿ ಸಮುದಾಯದವರನ್ನು ಸುಧಾಕರ್ ರಾಜಕೀಯವಾಗಿ ತುಳಿದಿದ್ದಾರೆ ಎಂದು ವಾಗ್ದಾಳಿ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
‘ಇದುವರೆಗೂ ಉಂಟಾಗಿದ್ದ ಎಲ್ಲಾ ಗೊಂದಲ ಬಗೆಹರಿದಿವೆ. ನನ್ನ ಬಗ್ಗೆ ಸಮುದಾಯದ ಮುಖಂಡರಲ್ಲಿದ್ದ ಅನುಮಾನ ನಿವಾರಿಸಲಾಗಿದೆ. ಸಮುದಾಯದ ಮುಖಂಡರನ್ನು ಉತ್ತಮವಾಗಿ ನಡೆಸಿಕೊಳ್ಳುವುದಾಗಿ ಸ್ವಾಮೀಜಿಗೆ ಭರವಸೆ ನೀಡಿದ್ದೇನೆ. ವಹ್ನಿಕುಲ ತಿಗಳ ಸಮುದಾಯ ಬಿಜೆಪಿ ಪರ ನಿಲ್ಲಲಿದೆ’ ಎಂದು ಸಭೆಯ ಬಳಿಕ ಸುಧಾಕರ್ ಮಾಹಿತಿ ನೀಡಿದರು.
ಆದಿಶಕ್ತಿ ಬ್ಯಾಂಕ್ ಅಧ್ಯಕ್ಷ ಕೆ.ಲಕ್ಷ್ಮಣ್, ಎಸ್.ಆರ್.ಎಸ್.ದೇವರಾಜ್, ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ವಿ.ಗೋಪಾಲಕೃಷ್ಣ, ರಾಜ್ಯ ಸಂಘದ ಉಪಾಧ್ಯಕ್ಷ ವೈ.ಎನ್.ಶಾಮಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಆರ್.ಮುನಿವೀರಣ್ಣ, ನಿರ್ದೇಶಕರಾದ ಎನ್.ಕನಕರಾಜು, ಕೆ.ಎಂ.ಮಂಜುನಾಥ್, ಜಿ.ಗಣೇಶ್, ಮುನೀಂದ್ರ, ಜಿ.ಎಂ.ಚಂದ್ರು, ಕರವೇ ಶಿವಕುಮಾರ್, ಡಿ.ಆರ್.ಚನ್ನಕೃಷ್ಣ, ವಿ.ಎಂ.ಮಂಜುನಾಥ್, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.