ADVERTISEMENT

ಭಯೋತ್ಪಾದನೆ ಹತ್ತಿಕ್ಕಿದ ಬಿಜೆಪಿ ಸರ್ಕಾರ

ದೇಶದಲ್ಲಿ ಭ್ರಷ್ಠಾಚಾರಮುಕ್ತ ಆಡಳಿತಕ್ಕೆ ಬದ್ಧತೆ–ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 13:23 IST
Last Updated 19 ಮಾರ್ಚ್ 2019, 13:23 IST
ಬಿಜೆಪಿ ಸಾಧನೆಯ ಕೈಪಿಡಿಯನ್ನು ವಿತರಿಸಿದ ಬಿಜೆಪಿ ಮುಖಂಡರು
ಬಿಜೆಪಿ ಸಾಧನೆಯ ಕೈಪಿಡಿಯನ್ನು ವಿತರಿಸಿದ ಬಿಜೆಪಿ ಮುಖಂಡರು   

ದೇವನಹಳ್ಳಿ: ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಮತ್ತೊಮ್ಮೆ ಬಿಜೆಪಿಗೆ ಮತ ನೀಡಿ ಮೋದಿ ಅವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಎಚ್.ಎಂ. ರವಿಕುಮಾರ್ ತಿಳಿಸಿದರು.

ಇಲ್ಲಿನ ಕುಂದಾಣ ಹೋಬಳಿ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ತೆರಳಿ ‘ಪ್ರಧಾನಿ ನರೇಂದ್ರ ಮೊದಿ ಅವರ ಐದು ವರ್ಷಗಳ ಸಾಧನೆಗಳ ಕೈಪಿಡಿ’ ವಿತರಿಸಿ ಮತಯಾಚನೆ ಮಾಡಿ ಅವರು ಮಾತನಾಡಿದರು.

ನೋಟು ರದ್ದತಿ ಮಾಡಿದ್ದರ ಪರಿಣಾಮ ಸಾವಿರಾರು ನಕಲಿ ಕಂಪನಿಗಳು ಬೆಳಕಿಗೆ ಬಂದು ಬಂದ್ ಆಗಿವೆ. ಭಯೋತ್ಪಾದನೆ ಮತ್ತು ಮಾವೋವಾದಿಗಳ ಉಪಟಳ ಹತ್ತಿಕ್ಕುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ, ಮುದ್ರಾ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ADVERTISEMENT

ಕೌಶಲ ಅಭಿವೃದ್ಧಿ, ಸ್ವಚ್ಛ ಭಾರತ್, ಅನ್ನದಾತ ಸುಖಿಭವ್ ಯೋಜನೆಗಳು ಹಾಗೂ ಬಡತನ ನಿರ್ಮೂಲನೆಗೆ ಒತ್ತು, ಹೀಗೆ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶವನ್ನು ಪ್ರಗತಿ ಪಥದತ್ತ ಹೆಜ್ಜೆ ಹಾಕಲು ಕಾರಣರಾಗಿದ್ದಾರೆ ಎಂದು ಹೇಳಿದರು.

ಬಿಜಿಪಿ ಜಿಲ್ಲಾ ಘಟಕ ಕಾರ್ಯದರ್ಶಿ ಕೆ.ಎನ್.ರಮೇಶ್ ಬಾಬು ಮಾತನಾಡಿ, ಕೇಂದ್ರ ಸರ್ಕಾರ ದೇಶದ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಆಯ್ಕೆ ಮಾಡಿದ್ದು ಈ ಪೈಕಿ ಬೆಂಗಳೂರು ನಗರ ಸೇರಿದೆ. ಅಡುಗೆ ಅನಿಲ, ಉಜಾಲ ಯೋಜನೆ ಅಡಿ ಎಲ್‌ಇಡಿ ದೀಪ. ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆಯ ವೇಗದ ಹೆಚ್ಚಳ ಆಗಿದೆ ಎಂದರು.

ರಾಷ್ಟ್ರೀಯ ಕೃಷಿ ಮಾರುಕಟ್ಟೆ, ರೈಲ್ವೆ ಸೇವೆ ಆಧುನೀಕರಣ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಖಾತೆಗೆ ₹6 ಸಾವಿರ, ಸ್ವಸ್ಥ ಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ವರೆಗಿನ ವೈದ್ಯಕೀಯ ವೆಚ್ಚದಂತಹ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕ ಉಪಾಧ್ಯಕ್ಷ ಕೆ.ಸಿ.ಮುನಿರಾಜು ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.