ದೇವನಹಳ್ಳಿ:ಹೆಚ್ಚುತ್ತಿರುವ ಅಪಘಾತಗಳು ಮತ್ತು ಅಪೌಷ್ಟಿಕತೆಯಿಂದ ಹೆರಿಗೆ ವೇಳೆಯಲ್ಲಿ ಅನೇಕ ಮಹಿಳೆಯರು ಸಕಾಲದಲ್ಲಿ ರಕ್ತ ದೊರೆಯದೆ ಸಾವನ್ನಪ್ಪುತ್ತಿದ್ದಾರೆ. ರಕ್ತದಾನ ಅಮೂಲ್ಯವಾದ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ರೆಡ್ ಕ್ರಾಸ್ ಘಟಕ ಕಾರ್ಯದರ್ಶಿ ಎನ್.ಕೆ.ಗುರುರಾಜ್ ಅಭಿಪ್ರಾಯ ಪಟ್ಟರು.
ಇಲ್ಲಿನ ನಂದಿ ಉಪಚಾರ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ, ನಂದಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ‘ಸ್ವಯಂಪ್ರೇರಿತ ರಕ್ತದಾನ ಮತ್ತು ಕಣ್ಣಿನಉಚಿತ ತಪಾಸಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ವೈದ್ಯಾಧಿಕಾರಿ ಡಾ.ಎಂ.ಪ್ರಸಾದ್ ಮಾತನಾಡಿ, ‘ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಕೃತಕವಾಗಿ ಅದನ್ನು ಉತ್ಪಾದಿಸಲು ಸಾಧ್ಯವಿಲ್ಲ. ತಮ್ಮ ದೇಹದ ರಕ್ತವನ್ನು ಪರೀಕ್ಷಿಸಿ ಯಾವ ಗುಂಪು ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ರಕ್ತ ಪರೀಕ್ಷೆಯಿಂದ ಮಾರಕ ರೋಗಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತದೆ. ರಕ್ತದಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿ, ಕೊಬ್ಬಿನಂಶ, ಹೃದಯಾಘಾತ ಮತ್ತು ರಕ್ತದ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗುವುದರ ಜೊತೆಗೆ ಮತ್ತೊಬ್ಬರ ಪ್ರಾಣ ಉಳಿಸಿದ ಸಾರ್ಥಕತೆ ಸಿಗುತ್ತದೆ’ ಎಂದು ಹೇಳಿದರು.
‘ನಂದಿ ಉಪಚಾರ್’ ಮುಖ್ಯಸ್ಥ ಕೃಷ್ಣ ಕುಮಾರ್ ಇದ್ದರು. ರಕ್ತದಾನ ಮಾಡಿದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.