ವಿಜಯಪುರ: ಒಂದೂವರೆ ತಿಂಗಳ ಕಾಲ ಲಾಕ್ ಡೌನ್ ನಿಂದಾಗಿ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಿದ್ದ ಸರ್ಕಾರ, ಮೂರು ದಿನಗಳಿಂದ ಸಂಚಾರ ಆರಂಭಿಸಿದ್ದರೂ ಬಸ್ಸುಗಳನ್ನು ಪ್ರಯಾಣಿಸಲಿಕ್ಕೆ ಪ್ರಯಾಣಿಕರು ಹಿಂದೇಟು ಹಾಕುತ್ತಿರುವ ಕಾರಣ ಬಸ್ಸುಗಳು ಖಾಲಿಯಾಗಿ ಸಂಚರಿಸುವಂತಾಗಿದೆ.
ಶಿಡ್ಲಘಟ್ಟದಿಂದ ವಿಜಯಪುರದ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಬಸ್ಸುಗಳಿಗೆ ಹತ್ತುವವರಿಗೆ ಶಿಡ್ಲಘಟ್ಟದಲ್ಲೆ ಸ್ಕ್ರೀನಿಂಗ್ ಮಾಡಿ ಹತ್ತಿಸಲಾಗುತ್ತಿದ್ದು, ಮಾರ್ಗ ಮಧ್ಯೆ ಸಿಗುವ ಮೇಲೂರು, ಮಳ್ಳೂರಿನಲ್ಲಿ ಬಸ್ಸುಗಳ ನಿಲುಗಡೆಗೆ ಅವಕಾಶ ನೀಡದೆ ವಿಜಯಪುರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರಾದರೂ ಪ್ರಯಾಣಿಕರು ಮೊದಲೇ ಪಾಸ್ ತೆಗೆದುಕೊಳ್ಳಬೇಕು.
ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿರಬೇಕು, ಸ್ಯಾನಿಟೈಸರ್ ಉಪಯೋಗ ಮಾಡಬೇಕು. ಬಸ್ಸಿನಲ್ಲಿ ಅಂತರ ಕಾಪಾಡಿಕೊಳ್ಳಬೇಕು ಎನ್ನುವ ನಿರ್ಬಂಧಗಳನ್ನು ವಿಧಿಸಿರುವುದು ಕೂಡಾ ಪ್ರಯಾಣಿಕರು ಬಸ್ಸಿಗೆ ಹತ್ತದಂತೆ ಮಾಡಿದೆ. ಬೆಳಿಗ್ಗೆ 3 ಬಸ್ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಕೇವಲ 25 ಮಂದಿ ಪ್ರಯಾಣಿಕರು ಮಾತ್ರ ಹತ್ತಿದರು. ಇಲ್ಲಿ ಹತ್ತುವಂತಹ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡುವ ವ್ಯವಸ್ಥೆ ಮಾಡಿಲ್ಲ. ಕೋಲಾರ, ಚಿಕ್ಕಬಳ್ಳಾಪುರದ ಕಡೆಯಿಂದ ಬಸ್ಸುಗಳು ಬರುತ್ತಿಲ್ಲ.
ಬೆಂಗಳೂರಿನಿಂದ ಈ ಭಾಗಕ್ಕೆ ಬರುವ ಬಸ್ಸುಗಳಿಗೂ ಪ್ರಯಾಣಿಕರಿಲ್ಲದೆ ಮೆಜೆಸ್ಟಿಕ್ನಲ್ಲಿ ನಿಂತಿವೆ. ಜನರು ಭಯದ ವಾತಾವರಣದಲ್ಲೆ ಇರುವುದರಿಂದ ಬಸ್ಸುಗಳಿಗೆ ಹತ್ತಿ ಹೋಗಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಡುತ್ತಿದ್ದಾರೆ. ಬೆಂಗಳೂರಿನಿಂದ ಬರುವವರು ಆನ್ ಲೈನ್ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಲಿಕ್ಕೆ ಕಂಡಕ್ಟರ್ ಒಬ್ಬರನ್ನು ನೇಮಕ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.