ADVERTISEMENT

ಜ.29ರಂದು ಕಾಗವಾಡ ಬಂದ್‌ಗೆ ಕರೆ

ಅಂಬೇಡ್ಕರ್‌ಗೆ ಅವಮಾನಿಸಿದವರ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 16:39 IST
Last Updated 28 ಜನವರಿ 2022, 16:39 IST
ಕಾಗವಾಡದಲ್ಲಿ ಸಂಘಟನೆಗಳ ಮಖಂಡರು ಶುಕ್ರವಾರ ಸಭೆ ನಡೆಸಿದರು
ಕಾಗವಾಡದಲ್ಲಿ ಸಂಘಟನೆಗಳ ಮಖಂಡರು ಶುಕ್ರವಾರ ಸಭೆ ನಡೆಸಿದರು   

ಮೋಳೆ: ‘ರಾಯಚೂರಿನಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೊಗೆ ಅವಮಾನ ಮಾಡಿರುವ ಆರೋಪ ಎದುರಿಸುತ್ತಿರುವ ಅಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿ ದಲಿತ ಸಂಘಟನೆಗಳಿಂದ ಜ.29ರಂದು ಕಾಗವಾಡ ಬಂದ್‌ಗೆ ಕರೆ ನೀಡಲಾಗಿದೆ.

ಕಾಗವಾಡದ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ದಸಂಸ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ್ ಮಾತನಾಡಿ, ‘ನ್ಯಾಯ ಕೊಡುವಂತಹ ವ್ಯಕ್ತಿಯೇ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಸ್ಥಾನದಿಂದ ವಜಾ ಮಾಡಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಿ ದೇಶ ದ್ರೋಹದ ಮೇಲೆ ಗಡಿಪಾರು ಮಾಡಬೇಕು. ಈ ವಿಷಯವಾಗಿ ಸರ್ಕಾರದ ಗಮನಸೆಳೆಯಲು ಕಾಗವಾಡ ಬಂದ್ ಮಾಡಲಾವುದು. ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು’ ಎಂದರು.

ADVERTISEMENT

ದಸಂಸ ಜಿಲ್ಲಾ ಸಂಚಾಲಕ ಶ್ರೀಕಾಂತ್ ತಳವಾರ ಮಾತನಾಡಿ, ‘ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ’ ಎಂದು ತಿಳಿಸಿದರು.

ಮುಖಂಡ ಪ್ರಕಾಶ ದೊಂಡಾರೆ, ‘ತಾಲ್ಲೂಕಿನ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಹಕಾರ ಕೊಡಬೇಕು’ ಎಂದು ಕೋರಿದರು.

ಮುಖಂಡ ಸುಭಾಷ್ ಡಾಲೆ ಮಾತನಾಡಿ, ’ನ್ಯಾಯಾಧೀಶರ ಹೇಳಿಕೆ ಹಿಂದೆ ಆರ್‌ಎಸ್ಎಸ್‌ ಕೈವಾಡವಿದೆ. ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಯಾರು ಕುಮ್ಮಕ್ಕು ನೀಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ಬಾಳಾಸಾಬ ಕಾಂಬಳೆ, ಜಯಪಾಲ ಬಡಿಗೇರ, ದೀಪಕ ಕಾಂಬಳೆ, ಮಹಾಂತೇಶ ಬಡಿಗೇರ, ವಿಜಯ ಸಂಭಾಳೆ, ಜಿತೇಂದ್ರ ಕಾಂಬಳೆ, ಅಣ್ಣಪ್ಪ ಚವ್ಹಾಣ, ಶಿಲಾದಾರ ಚವ್ಹಾಣ, ವಕೀಲರಾದ ಶಿವಾಜಿ ಕಾಂಬ್ಳೆ, ಎಸ್.ಎಸ್. ನಿಡೋಣಿ, ಯಲ್ಲಪ್ಪ ಕಾಂಬ್ಳೆ, ಅಮಿತ, ಸಚಿನ ಪೂಜಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.