ಸೂಲಿಬೆಲೆ: ಸಮೀಪದ ಹೊಸಕೋಟೆ ತಾಲ್ಲೂಕು ನಂದಗುಡಿ ಹೋಬಳಿಯಾದ್ಯಂತ ನಿಷೇಧಿತ ಕ್ಯಾಟ್ ಫಿಶ್ ತೆರವು ಕಾರ್ಯಾಚರಣೆ ಮಾಡಲಾಯಿತು.
ಬೈಲಾನರಸಾಪುರ, ಬಂಡಹಳ್ಳಿ, ಎನ್. ಹೊಸಹಳ್ಳಿ ಹಾಗೂ ಗೆದ್ದಲಹಳ್ಳಿಪುರ ಗ್ರಾಮಗಳಲ್ಲಿ ಕಾರ್ಯಾಚರಣೆಗೊಳಿಸಿ 25 ಕ್ಕೂ ಹೆಚ್ಚು ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದವು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ತಾಲ್ಲೂಕು ತಹಶೀಲ್ದಾರ್ ರಮೇಶ್, ಡಿವೈಎಸ್ಪಿ ನಿಂಗಪ್ಪ ಸಕ್ರಿ, ಸಿಪಿಐಗಳಾದ ಶಿವರಾಜ್, ಮಂಜುನಾಥ್, ಪಿಎಸ್ಐಗಳಾದ ಲಕ್ಷೀನಾರಾಯಣ್, ಗೋವಿಂದಪ್ಪ, ಅಶೋಕ್ ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ‘ಕ್ಯಾಟ್ ಫಿಶ್ ಹೊಂಡಗಳ ಬಗ್ಗೆ ಅನೇಕ ದೂರುಗಳು ಬಂದಿದ್ದವು, ಇದರ ಸಾಕಾಣಿಕೆ ಮಾಡುವವರು ಬೆಂಗಳೂರು ನಗರ ಹಾಗೂ ಮತ್ತಿತರ ಕಡೆಗಳಿಂದ ಕೋಳಿ, ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಹಾಗೂ ಸತ್ತ ನಾಯಿಗಳು, ಹಂದಿಗಳು ಆಹಾರವಾಗಿ ನೀಡುವುದರಿಂದ ಇದನ್ನು ತಿನ್ನುವ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದರು.
‘ಆದ್ದರಿಂದ ಇದನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದಕ್ಕಿಂತ ಹೆಚ್ಚು ಪ್ರಕರಣಗಳು ಒಬ್ಬ ವ್ಯಕ್ತಿಯ ಮೇಲೆ ದಾಖಲಾದರೆ ರೌಡಿಶೀಟರ್ ಆಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುವುದು ಹಾಗೂ ಗಡಿಪಾರು ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.