ವಿಜಯಪುರ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ನಿಧನದಿಂದಾಗಿ ಗೌರವಾರ್ಥ ರಾಜ್ಯಾದಾದ್ಯಂತ ಎಲ್ಲ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದ್ದರೂ ಇಲ್ಲಿನ ವಿಜಯಾ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಸುತ್ತಿದ್ದಾರೆ ಎಂದು ಎನ್.ಎಸ್.ಐ.ಯು ಸಂಘಟನೆ ರಾಜ್ಯ ಘಟಕ ಸಂಚಾಲಕ ಕೆ.ಎನ್.ಮುನೀಂದ್ರ ಆರೋಪಿಸಿದರು.
ವಿಜಯಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಮಾತನಾಡಿದ ಅವರು, ’ಇಲ್ಲಿ ತರಗತಿಗಳನ್ನು ನಡೆಸುವ ಮೂಲಕ ಸ್ವಾಮೀಜಿಗೆ ಅಪಮಾನವೆಸಗಿದ್ದಾರೆ. ತರಗತಿ ನಿಲ್ಲಿಸಿ ಮಕ್ಕಳನ್ನು ವಾಪಸ್ ಕಳುಹಿಸಿದ್ದೇವೆ‘ ಎಂದರು.
ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ’ಸಂಸ್ಥೆಯಲ್ಲಿ 10 ಶಾಲಾ ವಾಹನಗಳಿವೆ. 2 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇಂದು ಶಾಲಾ, ಕಾಲೇಜಿಗೆ ರಜೆ ನೀಡಿದ್ದೇವೆ. ನಾಳೆ ಪರೀಕ್ಷೆ ಇರುವ ಕಾರಣ ಕೆಲ ಮಕ್ಕಳು ಮಾತ್ರ ಬಂದು ತರಬೇತಿ ಪಡೆಯುತ್ತಿದ್ದಾರೆ. ನಾವು ಕಾಲೇಜು ನಡೆಸುತ್ತಿಲ್ಲ. ನಾವು ಸೋಮವಾರವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಇಂದು ರಜೆ ಘೋಷಿಸಿದ್ದೇವೆ‘ ಎಂದರು.
ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಮನೆಗಳಿಗೆ ವಾಪಸ್ ಕಳುಹಿಸಲಾಯಿತು. ಎನ್.ಎಸ್.ಐ.ಯು ಸಂಘಟನೆಯ ಮುಖಂಡರಾದ ವಿನಯ್ ಕುಮಾರ್, ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.