ದೊಡ್ಡಬಳ್ಳಾಪುರ:ನಗರದ ರಾಜ್ಕುಮಾರ್ ಕಲಾ ಭವನದಲ್ಲಿ ಇತ್ತೀಚೆಗೆ ನಿಧನರಾದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ರಾಜನ್ ಅವರಿಗೆ ತಾಲ್ಲೂಕಿನ ವಾದ್ಯಗೋಷ್ಠಿ ಕಲಾವಿದರಿಂದ ನುಡಿನಮನ ಮತ್ತು ಸ್ವರ ಸಿಂಚನ ಕಾರ್ಯಕ್ರಮ ನಡೆಯಿತು.
ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಗೂ ರಾಜನ್ ಸಂಗೀತ ಸಂಯೋಜಿಸಿರುವ ಗೀತೆಗಳನ್ನು ವಾದ್ಯಗೋಷ್ಠಿ ಕಲಾವಿದರು ಹಾಡುವ ಮೂಲಕ ನಮನ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಮುನೇಗೌಡ ಮಾತನಾಡಿ, ‘ಎಸ್ಪಿಬಿ ಸಂಗೀತ ಕ್ಷೇತ್ರದಲ್ಲಿ ಎಲ್ಲರಿಗಿಂತಲೂ ಭಿನ್ನವಾದ ಸಾಧನೆ ಮಾಡಿದ್ದಾರೆ. ಅವರ ಕಂಠಸಿರಿಯಿಂದ ಹೊರಬಂದ ಸಾವಿರಾರು ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಹಾಡುಗಳು ಇರುವವರೆಗೆ ಬಾಲಸುಬ್ರಹ್ಮಣ್ಯಂ ಜೀವಂತವಾಗಿರುತ್ತಾರೆ’ ಎಂದು ಹೇಳಿದರು.
ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಟಿ.ಎನ್. ಪ್ರಭುದೇವ್ ಮಾತನಾಡಿ, ಬಾಲಸುಬ್ರಹ್ಮಣ್ಯಂ ಗಾಯನ ಕ್ಷೇತ್ರದ ದಂತಕಥೆ. ರಾಜನ್ ಅವರದ್ದು ಸಂಗೀತ ಸಂಯೋಜನೆಯಲ್ಲಿ ಅಪ್ರತಿಮ ಸಾಧನೆ. ಸಹೋದರ ನಾಗೇಂದ್ರ ಅವರ ಜೊತೆಗೂಡಿ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಪ್ರೋತ್ಸಾಹಕರಾದ ಜನಪರ ಚಂದ್ರು, ಆರ್. ಸೋಮಶೇಖರ್, ವಾದ್ಯಗೋಷ್ಠಿ ಕಲಾವಿದರಾದ ರಾಮಕೃಷ್ಣ, ಬಿ. ನರಸಿಂಹಮೂರ್ತಿ, ಕಲಾವಿದ ಕೆಂಪಣ್ಣ, ದರ್ಗಾ ಜೋಗಿಹಳ್ಳಿ ಗ್ರಾಮ ಸದಸ್ಯ ದೊಡ್ಡನಂಜುಂಡಪ್ಪ, ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎ.ಸಿ. ಅಶೋಕ್, ತಾಲ್ಲೂಕು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ನಾಗರಾಜು, ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಚೌಡರಾಜ್, ತಾಲ್ಲೂಕು ಶಿವರಾಜ್ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.