ದೇವನಹಳ್ಳಿ: ಮತಗಳ್ಳತವೂ ಪ್ರಜಾಪ್ರಭುತ್ವದ ಕಗ್ಗೊಲೆಯಂತಹ ಹೀನಾ ಕೃತ್ಯವಾಗಿದೆ. ಇಂತಹ ದುರ್ಘಟನೆಗಳ ವಿರುದ್ಧ ಮತದಾರರು ಜಾಗೃತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ಬಿ.ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ತಾಲ್ಲೂಕು ಪಂಚಾಯಿತಿ ಕಚೇರಿಯವರೆಗೂ ಶುಕ್ರವಾರ ನಡೆದ ‘ಸಂವಿಧಾನ ರಕ್ಷಿಸಿ - ಪ್ರಜಾಪ್ರಭುತ್ವ ಉಳಿಸಿ’ ಎಂಬ ಮತಗಳ್ಳತನ ವಿರುದ್ಧ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
‘ಮತದಾನ ಹಕ್ಕು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊರೆತಿರುವ ಅತ್ಯಂತ ಶಕ್ತಿಯುತ ಹಕ್ಕು. ಇದು ಕೇವಲ ಮತ ಚಲಾಯಿಸುವ ಹಕ್ಕಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಮ್ಮ ಕೈಯಲ್ಲಿರುವ ಶಸ್ತ್ರ. ಮತಗಳ್ಳತನವು ಕೇವಲ ಒಂದು ಅಪರಾಧವಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದು ಕಿಡಿಕಾರಿದರು.
‘ಜನರ ನಿರ್ಧಾರವನ್ನು ವಂಚಿಸುವಂತಹ ಈ ಅನೈತಿಕ ಕೃತ್ಯ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಜಾಗೃತಿ ಜಾಥದಲ್ಲಿ ನಾಗರಿಕರು, ಯುವಕರು, ಮಹಿಳೆಯರು, ಹಿರಿಯರು ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವ ಉಳಿಸಿ – ಮತದಾನ ಹಕ್ಕು ಕಾಪಾಡೋಣ’ ಎಂದು ಹೇಳಿದರು.
ಮತಗಳ್ಳತನಕ್ಕೆ ವಿರೋಧ ಹಾಗೂ ಸಂವಿಧಾನ ರಕ್ಷಣೆಗೆ ಬದ್ಧ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಮ್ಮೆಲ್ಲರ ಒಗ್ಗಟ್ಟಿನಿಂದ ಮಾತ್ರ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.
ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಗನ್ನಾಥ್, ಬಯ್ಯಪ್ಪಾ ಸದಸ್ಯರಾದ ಪ್ರಸನ್ನ ಕುಮಾರ್, ಮಂಜುನಾಥ್, ಕೃಷಿಕ ಸಮಾಜದ ಅಧ್ಯಕ್ಷರಾದ ರವಿ ಕುಮಾರ್, ಬಮೂಲ್ ಸದಸ್ಯರಾದ ಎಸ್.ಪಿ.ಮುನಿರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.