ADVERTISEMENT

‘ಸಂವಿಧಾನ ಬದಲಿಸುವ ಹೇಳಿಕೆ ಆಕ್ಷೇಪಾರ್ಹ’

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ರಾಜ್ಯಮಟ್ಟದ ಸರ್ವ ಸದಸ್ಯರ ಸಭೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:42 IST
Last Updated 8 ಡಿಸೆಂಬರ್ 2018, 12:42 IST
ಅಂಬೇಡ್ಕರ್ ಪುತ್ಥಳಿಗೆ ಪುಪ್ಪ ನಮನ ಸಲ್ಲಿಸಿದ ಗಣ್ಯರು
ಅಂಬೇಡ್ಕರ್ ಪುತ್ಥಳಿಗೆ ಪುಪ್ಪ ನಮನ ಸಲ್ಲಿಸಿದ ಗಣ್ಯರು   

ದೇವನಹಳ್ಳಿ: ದೇಶದ ಶ್ರೇಷ್ಠ ಸಂವಿಧಾನ ಬದಲಿಸಬೇಕಿದ್ದರೆ ಮತ್ತೊಮ್ಮೆ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿ ಬರಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ರಾಜ್ಯಮಟ್ಟದ ಸರ್ವ ಸದಸ್ಯರ ಸಭೆ ಮತ್ತು ಅಂಬೇಡ್ಕರ್‌ ಅವರ 62ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಈ ಪೈಕಿ 30 ಕೋಟಿ ದಲಿತ ಸಮುದಾಯವಿದ್ದರೂ ಅಂಬೇಡ್ಕರ್‌ ಅವರಂತಹ ಮಹಾನ್ ಪುರುಷ ಹುಟ್ಟಿ ಬಂದಿಲ್ಲ. ‘ಕೆಲವರು ಸಂವಿಧಾನ ಬದಲಿಸಲು ಬಂದಿದ್ದೇವೆ. ಬದಲಿಸುತ್ತೇವೆ ಎಂದು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ ಮಾತನಾಡಿ ದೇಶದಲ್ಲಿ ವರ್ಗ, ಜಾತಿ, ವರ್ಣ, ಧರ್ಮದ ಆಧಾರದ ಮೇಲೆ ಕಂದಕ ಸೃಷ್ಟಿಸಲಾಗಿದೆ ಎಂದು ವಿಷಾದಿಸಿದರು.

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ‘ಬಿಜೆಪಿಯಿಂದ ಸಂವಿಧಾನ ಬದಲಿಸುವ, ಸುಡುವ ಬಗ್ಗೆ ಹೊಸದಾಗಿ ಹೇಳಿಕೆ ನೀಡುತ್ತಿಲ್ಲ. ಆರ್.ಎಸ್.ಎಸ್ ಕಾರ್ಯಸೂಚಿಯಂತೆ ಹೇಳಿಕೆ ಮುಂದುವರಿದಿದೆ ಅಷ್ಟೇ’ ಎಂದು ತಿಳಿಸಿದರು.

1955ರಲ್ಲಿ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು, ಸ್ವಯಂ ಸಂವಿಧಾನ ಸುಡುವುದಾಗಿ ಹೇಳಿಕೆ ನೀಡಿದ್ದರು. ಪ್ರಜಾಪ್ರಭುತ್ವದಡಿಯಲ್ಲಿ ರಚಿಸಿದ ಸಂವಿಧಾನವೆಂಬ ದೇವರಗುಡಿಯಲ್ಲಿ ದೆವ್ವಗಳನ್ನು ಕೂರಿಸಬಾರದು. ಕೂರಿಸಿದರೆ ಸುಡುವ ಅರ್ಥದಲ್ಲಿ ಮಾತನಾಡಿದ್ದರು. ಉದ್ಯೋಗ, ಕೃಷಿ, ವಿಮೆ, ಶಿಕ್ಷಣ ರಾಷ್ಟ್ರೀಕರಣವಾಗಬೇಕು ಎಂಬುದು ಅವರ ಆಶಯವಾಗಿತ್ತು. ಅವರು ಯಾವ ಧರ್ಮವನ್ನು ನಿರಾಕರಿಸಲಿಲ್ಲ. ಹಿಂದೂ ಧರ್ಮದಲ್ಲಿ ಕೆಲವು ಬದಲಾವಣೆಯಾಗಬೇಕೆಂದು ಬಯಸಿದ್ದರು. ಅದು ಸಾಧ್ಯವಾಗದಿದ್ದಾಗ ಬೌದ್ಧ ಧರ್ಮಕ್ಕೆ ಮಾರುಹೋದರು ಎಂದು ಅಭಿಪ್ರಾಯಪಟ್ಟರು.

ಇತಿಹಾಸ ಗೊತ್ತಿಲ್ಲದವರು ಟಿಪ್ಪು ಖಳನಾಯಕನಂತೆ ಬಿಂಬಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆರ್.ಎಸ್.ಎಸ್‌ನ ಕೂಗುಮಾರಿ. ಸಂವಿಧಾನ ಹಂತ – ಹಂತವಾಗಿ ತಿದ್ದುಪಡಿ ಮೂಲಕ ಸಂವಿಧಾನದ ತಿರುಳು ನಾಶಪಡಿಸುವ ಯತ್ನ ನಡೆದಿದೆ. ‘ದಲಿತರಿಗೆ ಸಂವಿಧಾನವೇ ರಕ್ಷಾ ಕವಚ’ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಭಾಗೀಯ ಸಂಚಾಲಕ ರಮೇಶ್ ಡಾಕುಳಗಿ ಮಾತನಾಡಿದರು. ಡಿಎಸ್ಎಸ್ ರಾಜ್ಯ ಘಟಕದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಮಾಜಿ ಶಾಸಕ ಸೈಯದ್ ಝುಲ್ಳೇಕರ್ ಹಶ್ಮಿ , ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ರಾಜ್ಯ ಸಂಘಟನಾ ಸಂಚಾಲಕರಾದ ಈರೇಶ್ ಹಿರೇಹಳ್ಳಿ, ನಾಗಣ್ಣ ಬಡಿಗೇರ, ಗೌತಮ್‌ ಪಾಟೀಲ್, ಮಲ್ಲೇ ಅಂಬುಗ, ಅರ್ಜುನ್ ಗೊಬ್ಬರು, ಸಾಹಿತಿ ಗೊಲ್ಲಹಳ್ಳಿ ಶಿವಪ್ರಕಾಶ್‌, ಜಿಲ್ಲಾ ಸಂಘಟನಾ ಸಂಚಾಲಕರಾದ ಬಿಸ್ನಳ್ಳಿಮೂರ್ತಿ, ಕೊರಳೂರು ಶ್ರೀನಿವಾಸ್, ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜು ಸಣ್ಣಕ್ಕಿ, ಎಚ್.ಕೆ.ವೆಂಕಟೇಶಪ್ಪ, ತಾಲ್ಲೂಕು ಪ್ರಧಾನ ಸಂಚಾಲಕ ನರಸಪ್ಪ, ಸಂಘಟನಾ ಸಂಚಾಲಕರಾದ ಪಿ.ಮುನಿರಾಜು, ವಿ.ರಮೇಶ್, ರವಿಕುಮಾರ್, ಗಣೇಶ್, ಸಿ.ಬಿ.ಮೋಹನ್ ಇದ್ದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.