ವಿಜಯಪುರ: ಹದಗೆಟ್ಟ ವ್ಯವಸ್ಥೆಯ ವಿರುದ್ಧ ಚಾಟಿ ಬೀಸಿ ಸರಿದಾರಿಗೆ ತರಲು ಕವಿಗಳು ಶ್ರಮಿಸಬೇಕು. ಜನಜಾಗೃತಿಗೆ ಕಾವ್ಯ ಒತ್ತಾಸೆಯಾಗಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಹೇಳಿದರು.
ಇಲ್ಲಿನ ಮಹಂತಿನ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ‘ಯುಗಾದಿ ಕವಿಗೋಷ್ಠಿ’ಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಕಾಯಿ ಅಂತಿರುವ ಯುವಕವಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದರು.
ಕವಿ ಮಾ.ಸುರೇಶ್ಬಾಬು ಮಾತನಾಡಿ, ಸಾಹಿತಿಗಳು, ಹಿರಿಯರು, ವಿಮರ್ಶಕರಿಂದ ತಿದ್ದಿಸಿಕೊಳ್ಳುವ ಜತೆಗೆ ಸ್ವವಿಮರ್ಶೆಯನ್ನೂ ಮಾಡಿಕೊಳ್ಳಬೇಕು. ಕವಿತೆಗಳು ತಾನೇ ತಾನಾಗಿ ಹುಟ್ಟಬೇಕೇ ವಿನಾ ಕಟ್ಟಬಾರದು. ಕವಿಯಾದವನು ಸದಾ ಜಾಗೃತ ಸ್ಥಿತಿಯಲ್ಲಿರಬೇಕು. ಸಾಮಾನ್ಯ ವ್ಯಕ್ತಿ ನೋಡುವುದಕ್ಕೂ ಕವಿ ಕಾಣುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು.
ಸಾಹಿತಿ ಸ್ವರ್ಣಗೌರಿ ಮಹದೇವ್ ಮಾತನಾಡಿದರು. ‘ಬೆಳಕು’ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪಮೇಟಿಗೌಡ, ಚಿದಾನಂದ ಬಿರಾದಾರ, ನಾಗರಾಜ್, ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅದ್ಯಕ್ಷ ಜೆ.ಆರ್.ಮುನಿವೀರಣ್ಣ, ಕಾರ್ಯದರ್ಶಿ ಮುನಿವೆಂಕಟರಮಣಪ್ಪ, ಟಿ.ಗೋವಿಂದರಾಜು, ಎಂ.ನಾರಾಯಣಸ್ವಾಮಿ, ಕೆ.ಕೆಂಚೇಗೌಡ, ಆರ್.ಮುನಿರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.