ಹೊಸಕೋಟೆ: ದೇಶದ ಜನ ನೆಮ್ಮದಿ ಬದುಕಲು ರಕ್ಷಾಕವಚದಂತಿರುವ ಸಂವಿಧಾನ ಬದಲಿಸುವ ಮಾತುಗಳು ಬಿಜೆಪಿ ಪದೇ ಪದೇ ಕೇಳಿಬರುತ್ತಿದೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ದಸಂಸ ಕರ್ನಾಟಕದ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತನ್ನು ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹೇಳುತ್ತಿದೆ. ಸಂವಿಧಾನ ಬದಲಿಸುವ ಮಾತು ಆಡಿದ ಅದೇ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಅದರ ಸಮಯ ಸಾಧಕತನಕಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಸಂವಿಧಾನ ರಕ್ಷಣೆಗೆ ನಮ್ಮ ಮುಂದೆ ಇರುವ ಪರ್ಯಾಯ ಮಾರ್ಗ ಎಂದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ದೇಶದಲ್ಲಿ ಮನುವಾದ ಮತ್ತು ಕೋಮುವಾದಿ ಸ್ಥಾಪಿಸುವ ಧ್ಯೇಯ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಪ್ರಜ್ಞಾವಂತ ಎಲ್ಲ ನಾಗರಿಕರು ಬಿಜೆಪಿಯನ್ನು ಸೋಲಿಸಬೇಕಿದೆ ಎಂದರು.
ದಸಂಸ ಕರ್ನಾಟಕದ ರಾಜ್ಯ ಕಲಾಮಂಡಳಿ ಸಂಚಾಲಕ ಕಲಾವಿದ ಯಲ್ಲಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬದಲಾಯಿಸಿ ಹಿಂದೂ ಧರ್ಮದ ಹೆಸರಿನಲ್ಲಿ ಧರ್ಮ ಸಂಸತ್ ಸ್ಥಾಪಿಸುವುದು ಬಿಜೆಪಿ ಹಾಗೂ ಆರ್ಎಸ್ಎಸ್ ಗುರಿಯಾಗಿದೆ. ಹೀಗಾಗಿ ಸುಮಾರು 400 ಲೋಕಸಭಾ ಸ್ಥಾನ ಗೆಲ್ಲಬೇಕೆಂದು ಅಪಾರ ಪ್ರಮಾಣದ ಅಕ್ರಮ ಹಣ ಖರ್ಚು ಮಾಡುತ್ತಿದ್ದಾರೆ ಎಂದು ದೂರಿದರು.
ದಲಿತ ಸಂಘರ್ಷ ಸಮಿತಿ ಕರ್ನಾಟಕ ಸಂಘಟನೆಯ ಕೋಲಾರ ಜಿಲ್ಲಾ ಸಂಚಾಲಕ ಬಸಪ್ಪ ಗುಲ್ಲಹಳ್ಳಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.