ADVERTISEMENT

ವಚನ ಚಳವಳಿಯ ಪ್ರವರ್ತಕ ದೇವರ ದಾಸಿಮಯ್ಯ

ಹಿಂದುಳಿದ ಕಾರಣಕ್ಕೆ ದಾಸಿಮಯ್ಯನನ್ನು ನಿರ್ಲಕ್ಷಿಸುವ ಹುನ್ನಾರಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 14:35 IST
Last Updated 10 ಏಪ್ರಿಲ್ 2019, 14:35 IST
ದೇವರಾಜ ಅರಸ್ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ರವಿಕಿರಣ್ ಮಾತನಾಡಿದರು
ದೇವರಾಜ ಅರಸ್ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ರವಿಕಿರಣ್ ಮಾತನಾಡಿದರು   

ದೊಡ್ಡಬಳ್ಳಾಪುರ: ನಗರದ ಶಾಂತಿನಗರ-ದರ್ಗಾಜೋಗಿಹಳ್ಳಿ ಶ್ರೀದೇವರ ದಾಸಿಮಯ್ಯ ಮಿತ್ರ ಮಂಡಳಿ ವತಿಯಿಂದ ಬುಧವಾರ ಕನ್ನಡದ ಆದ್ಯ ವಚನಕಾರ, ನೇಕಾರ, ಶರಣ ಶ್ರೀದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ನಡೆಯಿತು. ದೇವರ ದಾಸಿಮಯ್ಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ನೇಕಾರಿಕೆಯ ಎಲ್ಲ ಸಲಕರಣೆಗಳನ್ನು ಪೂಜೆಗೆ ಇರಿಸಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಾರ್ವಜನಿಕರಿಗೆ ಅರವಟಿಗೆಯ ಮೂಲಕ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ದೇವರಾಜ ಅರಸ್ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ರವಿಕಿರಣ್ ‘ಕನ್ನಡ ಸಾಹಿತ್ಯ ಲೋಕದಲ್ಲಿ ತೀವ್ರ ಸಂಚಲನ ಸೃಷ್ಠಿಸಿದ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾದ ವಚನ ಚಳವಳಿಯ ಆದ್ಯ ಪ್ರವರ್ತಕರಾದ ದಾಸಿಮಯ್ಯ. ತನ್ನ ಕಾಯಕ ನಿಷ್ಠೆಯ ಮೂಲಕ ಸಮಾಜದ ಚಿಕಿತ್ಸಕ ಶಕ್ತಿಯಾಗಿ ಬೆಳೆದರು’ ಎಂದರು.

ADVERTISEMENT

‘ಬಸವಾದಿ ಶರಣರಿಗೆ ಹಿರಿಯನಾಗಿ ದಾಸಿಮಯ್ಯ ಬಹುಮೂಲ್ಯ ದಿಕ್ಸೂಚಿಯನ್ನು ಕೊಟ್ಟಿದ್ದಾರೆ. ನೇಕಾರ ಸಮುದಾಯದ ಪ್ರಾತಿನಿಧಿಕ ವ್ಯಕ್ತಿಯಾಗಿರುವ ದಾಸಿಮಯ್ಯ ಎಲ್ಲ ಸಮುದಾಯಗಳೂ ಆರಾಧಿಸಬೇಕಾದ ಅನನ್ಯ ಶರಣ’ ಎಂದರು.

ಮಾಜಿ ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್ ಮಾತನಾಡಿ, ಉನ್ನತ ವ್ಯಕ್ತಿಗಳ ಆದರ್ಶಗಳು ಎಲ್ಲರಿಗೂ ಸಲ್ಲುವಂತಹವುಗಳು. ಸಮುದಾಯ, ವರ್ಗ ಮತ್ತು ಜಾತಿಗಳಿಗೆ ಸೀಮಿತವಾಗಿ ನೋಡುವ ಚಿಂತನೆ ದೂರವಾಗಬೇಕು. ದಾಸಿಮಯ್ಯ ಶ್ರೇಷ್ಠ ಸಾಮಾಜಿಕ ಚಿಂತಕ ಎಂದರು.

ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ ‘ದೇವರ ದಾಸಿಮಯ್ಯ ಆದ್ಯ ವಚನಕಾರ. ಬಸವಣ್ಣನಿಗಿಂತ ಹಿಂದೆಯೇ ವಚನ ಸಾಹಿತ್ಯಕ್ಕೆ ನಾಂದಿ ಹಾಡಿದ ವ್ಯಕ್ತಿ. ಬಸವಣ್ಣ ಅವರ ಅನೇಕ ವಚನಗಳಲ್ಲಿಯೂ ದಾಸಿಮಯ್ಯನ ಪ್ರಭಾವ ದಟ್ಟವಾಗಿದೆ. ಆದರೆ ಹಿಂದುಳಿದ ವರ್ಗದ ಕಾರಣದಿಂದಾಗಿ ದಾಸಿಮಯ್ಯನನ್ನು ನಿರ್ಲಕ್ಷಿಸುವ ಹುನ್ನಾರಗಳು ಚರಿತ್ರೆಯಲ್ಲಿ ನಡೆದಿವೆ’ ಎಂದರು.

ಸಂಘದ ಅಧ್ಯಕ್ಷ ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಂಗ ಮಂಡಲಿ ಅಧ್ಯಕ್ಷ ಕೆ.ಜಿ.ದಿನೇಶ್‌, ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ಕಾರ್ಯದರ್ಶಿ ಎ.ಎಸ್.ಕೇಶವ, ಸಹಕಾರ್ಯದರ್ಶಿ ನಟರಾಜ್, ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಕೆ.ವತ್ಸಲ, ಗಾಯತ್ರಿ ಪೀಠ ಮಿತ್ರ ಬಳಗದ ಕಾರ್ಯದರ್ಶಿ ಎ.ಕೆ.ರಮೇಶ್, ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್, ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾಗಭೂಷಣ್, ರಾಮಕೃಷ್ಣಯ್ಯ, ದೊಡ್ಡನಂಜುಂಡಪ್ಪ, ಲೀಲಾವತಿ ಚಂದ್ರಶೇಖರ್, ನಾಗಮಣಿ, ಚನ್ನವೀರಪ್ಪ, ಮಾಜಿ ಅಧ್ಯಕ್ಷ ಜೆ.ವೈ.ಮಲ್ಲಪ್ಪ, ಮಾಜಿ ಉಪಾಧ್ಯಕ್ಷ ಡಿ.ಎನ್.ತಿಮ್ಮರಾಜು, ಪ್ರಕಾಶ್‍ರಾವ್, ಶ್ರೀದೇವರ ದಾಸಿಮಯ್ಯ ಮಿತ್ರ ಮಂಡಲಿಯ ಎಲ್ಲ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.