ದೇವನಹಳ್ಳಿ: ಪಟ್ಟಣದ ರಾಣಿ ಸರ್ಕಲ್ ಬಳಿ ಇರುವ ಬುದ್ಧ, ಬಸವ, ಅಂಬೆಡ್ಕರ್ ಪ್ರತಿಮೆಗಳನ್ನು ಶನಿವಾರ ತಡರಾತ್ರಿ ವಿರೂಪಗೊಳಿಸಲು ಕಿಡಿಗೇಡಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮಾತನಾಡಿ, 'ದಲಿತರಿಗೆ ಸೇರಿದ ಭೂಮಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ ಪೂಜಿಸುತ್ತಿದ್ದು, ವ್ಯವಸಾಯ ಮಾಡುತ್ತಿದ್ದಾರೆ. ಇದು ಬಹುಕೋಟಿ ಮೌಲ್ಯದ ಭೂಮಿಯಾಗಿರುವುದರಿಂದ ಭೂಮಿ ಸ್ವಾಧೀನದಾರರಿಗೆ ತೊಂದರೆ ನೀಡಲು ಈ ರೀತಿಯ ಕೃತ್ಯ ಎಸೆಗಿರುವ ಶಂಕೆ ಇದೆ' ಎಂದರು.
ಶನಿವಾರ ರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿರುವ ಕಿಡಿಗೇಡಿಗಳ ತಂಡ ಪ್ರತಿಮೆಗಳನ್ನು ಧ್ವಂಸ ಮಾಡಲು ಯತ್ನಿಸಿದೆ. ಅಲ್ಲಿಯೇ ಇದ್ದ ಹೂವಿನ ಕುಂಡಗಳನ್ನು ಹೊಡೆದು ಹಾಕಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸುವಂತೆ ಒತ್ತಾಯಿಸಿದರು.
ನಾರಾಯಣಪ್ಪ ಮಾತನಾಡಿ, 'ಹತ್ತಾರು ವರ್ಷದಿಂದ ಈ ಭೂಮಿಯಲ್ಲಿದ್ದೇವೆ. ಜಮೀನಿನಲ್ಲಿ ವ್ಯಾಜ್ಯ ಸೃಷ್ಟಿಸಲು ಸಾಕಷ್ಟು ಜನರು ಬೆದರಿಕೆ ಹಾಕುತ್ತಿದ್ದಾರೆ. ಪದೇ ಪದೇ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಕುಟುಂಬಕ್ಕೆ ಪ್ರಾಣ ಭಯ ಎದುರಾಗಿದೆ. ರಕ್ಷಣೆ ನೀಡಬೇಕೆಂದು‘ ಮನವಿ ಮಾಡಿದರು.
ಅಂಬೇಡ್ಕರ್ ಸೇನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಹಾಲಕ್ಷ್ಮಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಯಸಂದ್ರ ಸೋಮು, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಪಿಳ್ಳಾಂಜಿನಪ್ಪ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ರಾಮಾಂಜಿನಪ್ಪ, ಶಿಢ್ಲಘಟ್ಟ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಕೆಇಬಿ ನಂಜುಂಡಪ್ಪ, ವೆಂಕಟಲಕ್ಷ್ಮ್ಮಮ್ಮ ನಾರಾಯಣಮ್ಮ, ಶಿವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.