ADVERTISEMENT

ದೇವನಹಳ್ಳಿ: ಗ್ರಾ‍.ಪಂ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:03 IST
Last Updated 10 ಜುಲೈ 2025, 2:03 IST
ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು
ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು   

ದೇವನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು.

ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ತೋಟಗಾರಿಕಾ ಉಪನಿರ್ದೇಶಕಿ ಕೆ. ಪವಿತ್ರಾ, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಹಂತದಲ್ಲಿರುವ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು ಸಕ್ರಿಯ ಆಗಬೇಕು. ಈ ಮೂಲಕ ಜೀವ ವೈವಿಧ್ಯ ಸಂರಕ್ಷಣೆಗೆ ಇರುವ ಕಾನೂನುಗಳು ಹಾಗೂ ಗ್ರಾ.ಪಂ. ಮಟ್ಟದ ಸಮಿತಿಗಳ ಅಧಿಕಾರಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿ ಕೆ.ಆರ್. ಪ್ರಸನ್ನ, ಗ್ರಾ.ಪಂ ಅಧ್ಯಕ್ಷರೇ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ನೇಮಿಸಬೇಕಾಗಿದ್ದು, ಗ್ರಾ.ಪಂ ಮಟ್ಟದ ಸಮಿತಿಯಲ್ಲಿ ಕನಿಷ್ಠ 7 ಜನ ಮತ್ತು ಗರಿಷ್ಠ 11 ಸದಸ್ಯರು ಇರಲು ಅವಕಾಶವಿದೆ. ಈ ಸಮಿತಿಗೆ ಪಿಡಿಒಗಳೇ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಿದರು.

ADVERTISEMENT

ವರ್ಷದಲ್ಲಿ ಕನಿಷ್ಠ ನಾಲ್ಕು ಸಭೆಗಳನ್ನು ನಡೆಸುವ ಮೂಲಕ ಗ್ರಾ.ಪಂ ವ್ಯಾಪ್ತಿಯ ಪ್ರಾಣಿ-ಪಕ್ಷಿ, ಗಿಡ-ಮರ ಒಳಗೊಂಡು ಒಟ್ಟಾರೆ ಪರಿಸರದ ಸಂರಕ್ಷಣೆಗೆ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಬೇಕು. ಕಳೆ ನಾಶಕ ಬಳಕೆ ಕಡಿಮೆ ಮಾಡಿ, ರೈತರು ಸಾವಯವ ಕೃಷಿಯತ್ತ ಗಮನಹರಿಸಬೇಕು. ಮಾವನ ಸಂಕುಲದ ಉಳಿವಿಗಾಗಿ ಜೀವ ವೈವಿಧ್ಯತೆ ರಕ್ಷಣೆ ಅಗತ್ಯ ಎಂದರು.

ತಾ.ಪಂ ಸಹಾಯಕ ನಿರ್ದೆಶಕ ದುರ್ಗಪ್ಪ, ಅಮರನಾರಾಯಣ್‌, ಕೃಷಿ ಸಹಾಯಕ ನಿರ್ದೇಶಕಿ ಸುಶೀಲಮ್ಮ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಬಾಬು, ರೇಷ್ಮೆ ಸಹಾಯಕ ನಿರ್ದೇಶಕಿ ಕಮಲಮ್ಮ, ವಲಯ ಅರಣ್ಯ ಅಧಿಕಾರಿ ನಾಗಾರ್ಜುನ್, ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಕಾರ್ಯದರ್ಶಿ ಒಳಗೊಂಡು ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಕ್ಕೊತಾ ಸಂರಕ್ಷಣೆ
ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ 13ನೇ ಶತಮಾನದಲ್ಲಿ ಚೋಳರ ಅಳ್ವಿಕೆ ಕಾಲದಲ್ಲಿ ನೆಡಲಾಗಿದ್ದ ಹುಣಸೇತೋಪನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಿದೆ.  ದೇವನಹಳ್ಳಿ ಚಕ್ಕೊತಾ ತಳಿಯ ಸರಂಕ್ಷಣೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಿಯಾಯೋಜನೆ ಅನುಮೋದನೆ ಪಡೆದುಕೊಂಡಿದ್ದು ಚಕ್ಕೊತಾ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಸಿ.ಎಸ್.ಶ್ರೀನಾಥಗೌಡ ತಿಳಿಸಿದರು. ಜೇನು ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವ ಜೊತೆಗೆ ಸಾವಯವ ಕೃಷಿ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.