ಚನ್ನರಾಯಪಟ್ಟಣ(ದೇವನಹಳ್ಳಿ): ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ಹಾಗೂ ಭೂಮಿ ಪೂಜೆ ಬಿರುಸುಗೊಂಡಿದೆ.
ಕಳೆದ ಎರಡು ದಿನಗಳಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳು ಭೂಮಿ ಪೂಜೆ ಹೋಬಳಿವಾರು ನಡೆಯುತ್ತಿದ್ದು, ಭಾನುವಾರ ತೂಬಗೆರೆ ಹೋಬಳಿಯಲ್ಲಿ 17 ಗ್ರಾಮಗಳಲ್ಲಿ ಭೂಮಿ ಪೂಜೆ ಸಲ್ಲಿಸಿದ್ದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಸೋಮವಾರ ಚನ್ನರಾಯಪಟ್ಟಣ ಹೋಬಳಿಯ 13 ಕಾಮಗಾರಿಗಳಿಗೆ ಚಾಲನೆ ನೀಡಿದರು.
ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವ ಕಾರಣ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇನ್ನೂ ದೇವನಹಳ್ಳಿಯ ಟೌನ್ನ ವೇಣುಗೋಪಾಲಸ್ವಾಮಿ ದೇಗುಲ ರಸ್ತೆಗೆ ಟೆಂಡರ್ ಆಗುವ ಮುನ್ನವೇ ಒಟ್ಟು ₹30 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ನಡೆಸಲಾಗಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬರುತ್ತಿದೆ.
ತಾಲ್ಲೂಕಿನ ಚೌಡಪ್ಪನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ₹1.5 ಕೋಟಿ ಅನುದಾನ ನೀಡಲಾಗಿದೆ. ಚನ್ನರಾಯಪಟ್ಟಣ ಹೋಬಳಿಯ ಬೀಡಿಗಾನಹಳ್ಳಿ, ದಿನ್ನೂರು, ಐಬಸಾಪುರ, ಪೋಲನಹಳ್ಳಿ, ದೊಡ್ಡಹೊಸಹಳ್ಳಿ ಹಾಗೂ ಬಾಲದಿಮ್ಮನಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗಳ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದೆ. ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು’ ಎಂದು ತಿಳಿಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಚನ್ನರಾಯಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜ್,ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ವಸಂತ್, ಮಾಜಿ ಅಧ್ಯಕ್ಷರಾದ ಮನೋಹರ್, ಸಿ.ಎಸ್.ರಾಜಣ್ಣ, ಕೃಷ್ಣಮೂರ್ತಿ, ತಾಲ್ಲೂಕು ಕಾರ್ಯದರ್ಶಿ ಶಿವಾನಂದ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಪಂಗಿಯಪ್ಪ, ಹೋಬಳಿ ಯುವ ಜೆಡಿಎಸ್ ಅಧ್ಯಕ್ಷ ಗೋಪಿ, ನಿರ್ದೇಶಕ ಜಯರಾಮೇಗೌಡ, ಜೆಡಿಎಸ್ ಮುಖಂಡರುಗಳಾದ ಶಂಕರ್, ರಾಜೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.