ADVERTISEMENT

ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 13:23 IST
Last Updated 20 ಫೆಬ್ರುವರಿ 2019, 13:23 IST
ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಕ್ತರು ಭಾಗವಹಿಸಿದ್ದರು
ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಭಕ್ತರು ಭಾಗವಹಿಸಿದ್ದರು   

ದೇವನಹಳ್ಳಿ: ನಗರದ ಐತಿಹಾಸಿಕ ಕೋಟೆ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ನಗರದ ರಾಜ ಬೀದಿಯಲ್ಲಿ ವಿಜೃಂಬಣೆಯಿಂದ ನೆರವೇರಿತು.

ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಭಕ್ತಿಪೂರ್ವಕವಾಗಿ ಬಾಳೆ ಹಣ್ಣಿಗೆ ದವನ ಸಿಕ್ಕಿಸಿ ರಥಕ್ಕೆ ಎಸೆದು ಸಮರ್ಪಿಸಿದರು.

ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಫೆ.12ರಿಂದ ಸೂರ್ಯ ಮಂಡಲೋತ್ಸವ, ಶೇಷ ವಾಹನೋತ್ಸವ, ಧ್ವಜ ಪೀಠೋತ್ಸವ, ಬಳೆ ತೊಡಿಸುವ ಶಾಸ್ತ್ರ, ಉಯ್ಯಾಲೋತ್ಸವ ಮತ್ತು ಕಲ್ಯಾಣ ಗರುಡೋತ್ಸವ ನಡೆಸಲಾಗಿತ್ತು.

ADVERTISEMENT

ರಥೋತ್ಸವದ ದಿನ ಬೆಳಿಗ್ಗೆ ಸುಪ್ರಭಾತ ಸೇವೆ, ತೋಮಾಲೆ ಸೇವೆ, ನವಗ್ರಹ ಪೂಜೆ, ಓಲಗದ ಸೇವೆ ನಡೆಯಿತು. ಬೆಳಿಗ್ಗೆ 11 ಕ್ಕೆ ಖಜಾನೆ ಭದ್ರತಾ ಕೊಠಡಿಯನ್ನು ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ತಹಶೀಲ್ದಾರ್ ಕೇಶವಮೂರ್ತಿ ಹೊರತೆಗೆದು ಅಮೂಲ್ಯ ವಜ್ರ ಖಚಿತ ಆಭರಣಗಳನ್ನು ಪರಿಶೀಲಿಸಿ ಬಿಗಿ ಭದ್ರತೆಯಲ್ಲಿ ದೇವಾಲಯಕ್ಕೆ ತಂದರು. ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನದಂತೆ ರುಕ್ಮಿಣಿ, ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿಗೆ ಅಭಿಷೇಕದ ನಂತರ ವಸ್ತ್ರ ಧಾರಣೆ ಮಾಡಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತೊಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಮೂಲ್ಯ ಆಭರಣಗಳನ್ನು ಉತ್ಸವ ಮೂರ್ತಿಗೆ ತೊಡಿಸಿ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಅಶಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪುರಸಭೆ ಸದಸ್ಯರು, ಪುರಸಭೆ ಎಲ್ಲ ಸಿಬ್ಬಂದಿ ವರ್ಗ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶ್ರೀ ವೇಣುಗೋಪಾಲಸ್ವಾಮಿ ಅನ್ನದಾನ ಸಮಿತಿ ವತಿಯಿಂದ ದೊಡ್ಡ ಅಣ್ಣಯ್ಯಪ್ಪ ಛತ್ರದಲ್ಲಿ ಹತ್ತು ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.