ತಾವರೆಕೆರೆ(ಹೊಸಕೋಟೆ): ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಆಯಾಯ ವಲಯಗಳಲ್ಲೆ ಇ-ಪೌತಿ ಖಾತೆ ಆಂದೋಲನ ಆರಂಭಿಸಲಾಗಿದೆ. ತಂತ್ರಾಂಶದಲ್ಲಿ ಯಾವುದೇ ಅಡತಡೆ ಇಲ್ಲದೆ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆಯ ವರ್ಗಾವಣೆ ಆಗಲಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕ ರಮೇಶ್ ಹೇಳಿದರು.
ತಾಲ್ಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿರುವ ಇ–ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಪಹಣಿಗಳಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಇದರಿಂದ ಜಮೀನಿನ ದಾಖಲೆಗಳು ನಕಲಿ ಆಗುವುದು ತಪ್ಪಿದೆ. ಜೊತೆಗೆ ಈಗಾಗಲೇ ಗ್ರಾಮಾಡಳಿತಾಧಿಕಾರಿಗಳು ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ, ಈಗ ಹೆಸರಿನಲ್ಲಿರುವ ಪಹಣಿಗಳನ್ನು ಗುರುತಿಸುವ ಕೆಲಸ ಮಾಡಿರುತ್ತಾರೆ. ಹಾಗಾಗಿ ಈ ಅಂಕಿ ಅಂಶ ಬಳಸಿಕೊಂಡು ಕಂದಾಯ ಅಧಿಕಾರಿಗಳು ನೂತನ ತಂತಾಂಶ್ರದ ಮೂಲಕ ಅರ್ಜಿಗಳನ್ನು ವಿಲೇವಾರಿ ಮಾಡಬಹುದು ಎಂದು ತಿಳಿಸಿದರು.
ಪಿಡಿಒ ಮುನಿಗಂಗಯ್ಯ, ಗ್ರಾಮ ಕಂದಾಯ ಇಲಾಖೆ ಅಧಿಕಾರಿಯಾದ ಶಾಮ್ ಸುಂದರ್ , ಸಹಾಯಕ ರಾಮಂಜಿ, ಕರ ವಸಲಿಗಾರ ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ಉಪಸ್ಥಿತರಿದ್ದರು.
ಏನೇನು ದಾಖಲೆ ಬೇಕು?
ತಾವರೆಕೆರೆ ವಲಯಕ್ಕೆ ಸೇರಿದ 22 ಗ್ರಾಮಗಳಲ್ಲಿ ಜಮೀನು ಹೊಂದಿರುವವರು ಇ–ಪೌತಿ ಖಾತೆ ಆಂದೋಲನ ನಡೆಯುತ್ತಿದ್ದು ಉಚಿತವಾಗಿ ಪೌತಿ ಖಾತೆ ಮಾಡಿಕೊಡಲಾಗುತ್ತಿದೆ. ಇದಕ್ಕೆ ಅರ್ಜಿದಾರರು ಆಧಾರ್ ಕಾರ್ಡ್ ವಂಶವೃಕ್ಷ ಮೃತರ ಮರಣ ಪ್ರಮಾಣ ಪತ್ರ ಅಫಿಡವಿಟ್ ಸೇರಿದಂತೆ ಇತರೆ ದಾಖಲೆ ತರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.