ದೊಡ್ಡಬಳ್ಳಾಪುರ: ಯುವ ಜನತೆ ದೇಶದ ಆಧಾರ ಸ್ತಂಭ. ಯುವ ಜನರು ಹಾಳಾದರೆ ದೇಶ ಹಾಳಾದಂತೆ. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕಷ್ಟೇ ಅಲ್ಲದೇ ದೇಶದ ಪ್ರಗತಿಗೂ ಮಾರಕವಾಗಲಿದೆ ಎಂದು ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಬಿ.ನವೀನ್ಕುಮಾರ್ ಹೇಳಿದರು.
ನಗರದ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳ ಚಟ ಯುವ ಜನರಿಗೆ ಬೇಗ ಹತ್ತುತ್ತದೆ. ಮೊದಲು ಉಚಿತ ಎಂದು ನಿಮ್ಮನ್ನು ಬಲೆಗೆ ಬೀಳಿಸಿಕೊಂಡು ನಂತರ ಸಾವಿರಾರು ರೂಪಾಯಿ ವಸೂಲಿ ಮಾಡಿ ನಿಮ್ಮ ಭವಿಷ್ಯವನ್ನು ಹಾಳು ಮಾಡಲಾಗುತ್ತದೆ. ಮಾದಕ ವಸ್ತುಗಳ ಸೇವನೆ ನಮ್ಮ ದೇಹಕ್ಕಷ್ಟೇ ಅಲ್ಲದೇ ಸಾಮಾಜಿಕ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಮಾದಕ ವಸ್ತುಗಳ ವ್ಯಸನ ಯುವಜನತೆ ಮೇಲೆ ಪರಿಣಾಮ ಬೀರುತ್ತಿದೆ. ಖುಷಿ, ಗೆಳೆಯರ ಒತ್ತಡ, ನೋವು ನಿವಾರಣೆ ನೆಪ, ಆಧುನಿಕ ಜೀವನ ಶೈಲಿ ಅನುಕರುಣೆ ಮಾಡಲು ವ್ಯಸನಕ್ಕೆ ತುತ್ತಾಗುತ್ತಾರೆ. ಇದರಿಂದ ಹಿಂಸಾತ್ಮಕ ನಡವಳಿಕೆ, ಉದ್ಯೋಗ ಮತ್ತು ಕೌಟುಂಬಿಕ ಸಮಸ್ಯೆಗಳು, ಆತ್ಮಹತ್ಯೆ, ಕಾನೂನು ಬಾಹಿರ ಕೃತ್ಯಗಳು, ದೈಹಿಕ, ಮಾನಸಿಕ ಕಾಯಿಲೆಗಳು, ಲೈಂಗಿಕ ರೋಗಗಳು, ಗರ್ಭಪಾತ, ರಸ್ತೆ ಅಪಘಾತಗಳು ಸಂಭವಿಸುತ್ತವೆ. ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ಯುವಕರು ನಿರ್ನಾಮವಾಗುತ್ತಾರೆ. ಹೀಗಾಗಿ ಯುವಕರು ಇಂಥ ವಸ್ತುಗಳಿಂದ ದೂರ ಇರಬೇಕು ಎಂದರು.
ಶ್ರೀರಾಮ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್, ಬಡವರು, ಶ್ರೀಮಂತರು ಎನ್ನುವ ಬೇಧವಿಲ್ಲದೇ ಮಾದಕ ವಸ್ತುಗಳ ಜಾಲಕ್ಕೆ ಬಿದ್ದು, ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು.
ಸಬ್ ಇನ್ಸ್ಪೆಕ್ಟರ್ ಸುನೀಲ್ ಗೋತ್ರಾಳೆ, ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಾಂಕ್, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮಿತಿ ಚೇತನ್,ಕೇಶವ್, ಶ್ವೇತ, ಅಂಜಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.