ವಿಜಯಪುರ: ನಾಟಕಗಳು ಉತ್ತಮ ಮೌಲ್ಯ, ಸಂಸ್ಕೃತಿಯ ಪ್ರತಿಬಿಂಬವಾಗಿವೆ. ನಾಟಕದಲ್ಲಿನ ಪಾತ್ರಗಳು ಆದರ್ಶಮಯವಾಗಿರುತ್ತವೆ ಎಂದು ಜಾನಪದ ಕಲಾವಿದ ಮುನಿರಾಜು ಹೇಳಿದರು.
ವೆಂಕಟಗಿರಿಕೋಟೆಯಲ್ಲಿ ವಿನಾಯಕಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಿದ್ದ ‘ಕುರುಕ್ಷೇತ್ರ’ ನಾಟಕದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕಲೆ ಮತ್ತು ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಬೆಳೆಸಬೇಕು. ಕಲೆಗೆ ಜಾತಿ, ಧರ್ಮದ ಹಂಗಿಲ್ಲ. ಉತ್ತಮ ಕಲಾವಿದರನ್ನು ಸಮಾಜ ಜಾತಿಯ ಚೌಕಟ್ಟು ಮೀರಿ ಗೌರವಿಸುತ್ತದೆ. ಧಾರಾವಾಹಿಗಳ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಂಡಿವೆ. ಕಲಾ ಪ್ರದರ್ಶನಕ್ಕೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು. ಕಲಾವಿದರ ಮಾಸಾಶನವನ್ನು ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.
ದೂರದರ್ಶನ ಕಲಾವಿದೆ ಆಶಾರಾಣಿ ಮಾತನಾಡಿ ‘ಸಿನಿಮಾ ಮತ್ತು ಧಾರವಾಹಿಗಳಲ್ಲಿ ಕ್ರೌರ್ಯ ಮತ್ತು ಮನೆಮುರುಕತನ ವಿಜೃಂಭಿಸುತ್ತಿದೆ. ಪೌರಾಣಿಕ ನಾಟಕಗಳು ಸತ್ಯ ಮತ್ತು ಧರ್ಮಕ್ಕೆ ಗೆಲುವು ಎನ್ನುವ ಬದುಕಿನ ಮೌಲ್ಯಗಳನ್ನು ಸಾರುತ್ತಿವೆ. ಇಂತಹ ನಾಟಕಗಳ ವೀಕ್ಷಣೆಯ ಮೂಲಕ ಅದೆಷ್ಟೋ ಕುಟುಂಬಗಳು ಇಂದಿಗೂ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಇಂದಿನ ಯುವಪೀಳಿಗೆ ನಾಟಕಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.
ನಾಟಕದ ಮಧ್ಯೆ ಆಗಾಗ ಹಾಸ್ಯ ಕಲಾವಿದರ ಹಾವಭಾವ ಜನರನ್ನು ನಗೆಗಡಲಲ್ಲಿ ತೇಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.