ವಿಜಯಪುರ(ಬೆಂ.ಗ್ರಾಮಾಂತರ): ವಿದ್ಯುತ್ ಬಿಲ್ ಪಾವತಿಸದ ಕಾರಣ ಪಟ್ಟಣದ ಪ್ರವಾಸಿಮಂದಿರಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಸುಮಾರು ₹30,000 ಬಿಲ್ ಬಾಕಿ ಇರುವ ಕಾರಣ ಸಂಪರ್ಕ ಕಡಿತಗೊಳಿಸಲಾಗಿದೆ. ಆದರೆ ದುರಸ್ತಿ ನೆಪಯೊಡ್ಡಿ ಪ್ರವಾಸಿ ಮಂದಿರ ಬಂದ್ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪಟ್ಟಣವು ವಾಣಿಜ್ಯ ನಗರಿಯಾಗಿ ಬೆಳೆಯುತ್ತಿದೆ. ವ್ಯಾಪಾರ ಚಟುವಟಿಕೆಗಳಿಗಾಗಿ ದೂರದ ಊರು ಹಾಗೂ ಅಂತರರಾಜ್ಯಗಳಿಂದ ವ್ಯಾಪಾರಿಗಳು ಇಲ್ಲಿಗೆ ಬಂದು ಹೋಗುತ್ತಾರೆ. ಪಟ್ಟಣದಲ್ಲಿ ವ್ಯವಸ್ಥಿತವಾದ ವಸತಿ ಗೃಹಗಳು ಇಲ್ಲ. ಬೇರೆ ಊರುಗಳಿಂದ ಬಂದವರಿಗೆ ಉಳಿದುಕೊಳ್ಳಲು ಸ್ಥಳಾವಕಾಶವಿಲ್ಲದೆ ಪ್ರವಾಸಿ ಮಂದಿರವನ್ನೆ ಆಶ್ರಯಿಸಿದ್ದರು. ಈಗ ಅವರೆಲ್ಲ ಉಳಿದುಕೊಳ್ಳಲು ಪರದಾಡುವಂತಿದೆ.
ದುರಸ್ತಿ ನಡೆಯುತ್ತಿದೆ. ಯಾರಿಗೂ ಪ್ರವೇಶವಿಲ್ಲ ಎಂದು ನಾಮಫಲಕ ಅಳವಡಿಸಿ ಆ.25ರಿಂದ ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿದೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.
ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರ ಸುಸ್ಥಿತಿಯಲ್ಲಿ ಇಟ್ಟುಕೊಳ್ಳದೆ ಇರುವುದು ಪ್ರವಾಸಿಗರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.