ADVERTISEMENT

‘ಗುಣಾತ್ಮಕ ಫಲಿತಾಂಶಕ್ಕೆ ಒತ್ತು ನೀಡಿ’

​ಪ್ರಜಾವಾಣಿ ವಾರ್ತೆ
Published 3 ಮೇ 2019, 13:19 IST
Last Updated 3 ಮೇ 2019, 13:19 IST
ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದ ಗಾಯಿತ್ರಿ ದೇವಿ 
ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದ ಗಾಯಿತ್ರಿ ದೇವಿ    

ದೇವನಹಳ್ಳಿ: ಶೇಕಡವಾರು ಫಲಿತಾಂಶಕ್ಕಿಂತ ಗುಣಾತ್ಮಕ ಫಲಿತಾಂಶಕ್ಕೆ ಹೆಚ್ಚಿನ ಒತ್ತು ನೀಡ ಬೇಕಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಶಾಸಕರ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ 2018–19ನೇ ಸಾಲಿನ ಹತ್ತನೇ ತರಗತಿ ವಾರ್ಷಿಕ ಫಲಿತಾಂಶದ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ತಾಲ್ಲೂಕಿನಲ್ಲಿ 21 ಪ್ರೌಢಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. ಇದರಲ್ಲಿ ಎರಡು ಸರ್ಕಾರಿ ಶಾಲೆ ಎರಡು ವಸತಿ ಶಾಲೆಗಳು ಸೇರಿವೆ. 19 ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಶೇ 100 ಫಲಿತಾಂಶಕ್ಕೆ ಪ್ರಯತ್ನಿಸಿ ಎಂದರು.

ಶೈಕ್ಷಣಿಕ ಸಾಲಿನ ಆರಂಭದಿಂದಲೇ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವಿಷಯವಾರು ಶಿಕ್ಷಕರ ಕೊರತೆ ಇರುವ ಶಾಲೆಗಳ ಪಟ್ಟಿ ನೀಡಿ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರಬಾರದು ಎಂದರು.

ADVERTISEMENT

ದೇವನಹಳ್ಳಿ ತಾಲ್ಲೂಕು ರಾಜ್ಯದಲ್ಲಿ ಐದನೇ ಸ್ಥಾನ ಪಡೆದಿದೆ. ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನಕ್ಕೆ ದಾಪುಗಾಲು ಇಟ್ಟಿದೆ. 2019–20ನೇ ಶೈಕ್ಷಣಿಕ ಸಾಲಿನಲ್ಲಿ ಈಗಿರುವ ಸ್ಥಾನಕ್ಕಿಂತ ಮೇಲೇರಬೇಕು. ಫಲಿತಾಂಶ ಸುಧಾರಣೆಗೆ, ಯಾವ ರೀತಿ ಬೋಧನಾ ವಿಧಾನಗಳನ್ನು ಅನುಸರಿಸುವ ಕುರಿತು ತಜ್ಞ ಶಿಕ್ಷಕರಿಂದ ಸಲಹೆ ಪಡೆದು ಕಾರ್ಯಪ್ರವೃತ್ತರಾಗಬೇಕು ಎಂದರು.

ಎಲ್ಲ ರೀತಿಯ ಸಹಕಾರ ಸದಾ ಇರುತ್ತದೆ. ಫಲಿತಾಂಶ ಸುಧಾರಣೆಗೆ ಶ್ರಮಿಸಿದ ಎಲ್ಲ ಶಿಕ್ಷಕರಿಗೆ ಅಧಿಕಾರಿಗಳ ವರ್ಗಕ್ಕೆ ಅಭಿನಂದನೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.