ಆನೇಕಲ್ : ತಾಲ್ಲೂಕಿನ ಜಿಗಣಿ ಹೋಬಳಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಶನಿವಾರ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ನಡೆಸಿದರು. ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮುಖಂಡರೊಂದಿಗೆ ಮತಯಾಚಿಸಿದರು.
ತಾಲ್ಲೂಕಿನ ಬನ್ನೇರುಘಟ್ಟ, ಮಂಟಪ, ರಾಗಿಹಳ್ಳಿ, ಕಲ್ಲುಬಾಳು, ಜಿಗಣಿ, ಹಾರಗದ್ದೆ, ಹೆನ್ನಾಗರ, ತಿರುಪಾಳ್ಯ, ದೊಡ್ಡತೋಗೂರು, ಕೋನಪ್ಪನಅಗ್ರಹಾರ, ನಾಗನಾಥಪುರ, ಬೇಗೂರು ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಬೆಳಗಿನಿಂದ ಸಂಜೆವರೆಗೂ ಮತಯಾಚನೆಯಲ್ಲಿ ಪಾಲ್ಗೊಂಡರು.
ಡಿ.ಕೆ.ಸುರೇಶ್ ಮಾತನಾಡಿ, ‘ಆನೇಕಲ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ. ಜನರ ಕೆಲಸ ಕಾರ್ಯಗಳಿಗೆ ಸ್ಪಂದಿಸಿದ್ದೇನೆ. ಹಾಗಾಗಿ ಜನತೆ ಮತ ನೀಡುವ ಮೂಲಕ ಕೂಲಿ ನೀಡಬೇಕು. ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕಾವೇರಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಉಳಿದ ಗ್ರಾಮಗಳಿಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಎಂಬುದು ನನ್ನ ಗುರಿಯಾಗಿದೆ’ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜನರ ಮೇಲಿನ ನಂಬಿಕೆಯೇ ಶ್ರೀರಕ್ಷೆಯಾಗಿದೆ. ಪ್ರತಿ ಗ್ರಾಮಗಳಲ್ಲಿಯೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
‘ನನ್ನ ಗುರುತು ಕೈ ಗುರುತಾಗಿದೆ. ಯಾವ ಕೈಗೆ ಶಕ್ತಿಕೊಟ್ಟರೆ ದಾನ ಧರ್ಮ ಮಾಡುತ್ತಾರೆ ಎಂಬುದು ಜನರಿಗೆ ತಿಳಿದಿದೆ. ಜನರ ಕೆಲಸಗಳಿಗೆ ನೆರವಾಗುವುದು ಕೈಗೆ ಜನ ಅಧಿಕಾರ ನೀಡಬೇಕು. ಬಡವರಿಗೆ, ಕಾರ್ಮಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಬಲ ನೀಡಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಬೇಕು. ರಾಜ್ಯದ ಬಡವರ ಅಭಿವೃದ್ಧಿಗೆ ರಾಜ್ಯದಲ್ಲಿನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಬದ್ಧವಾಗಿದೆ. ಗ್ಯಾರಂಟಿಗಳು ಜನರ ಅಭಿವೃದ್ಧಿಗೆ ಪೂರಕವಾಗಿದೆ. ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಬಾಬುರೆಡ್ಡಿ ಮಾತನಾಡಿದರು.
ಡಿ.ಕೆ.ಸುರೇಶ್ ಅವರು ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಮುಖಂಡರಾದ ಇಂಡ್ಲವಾಡಿ ನಾಗರಾಜು, ಎನ್.ಬಿ.ಐ.ನಾಗರಾಜು, ಕೆ.ಎಸ್.ನಟರಾಜ್, ತಿಮ್ಮಾರೆಡ್ಡಿ, ಹಾ.ವೇ.ವೆಂಕಟೇಶ್, ಪ್ರಭಾಕರರೆಡ್ಡಿ, ಅಚ್ಯುತರಾಜು, ಬನ್ನೇರುಘಟ್ಟ ಜಯರಾಮ್, ಶ್ರೀಧರ್, ಮಂಟಪ ನವೀನ್, ಭುವನ್, ಪ್ರಸನ್ನಕುಮಾರ್, ನರೇಂದ್ರಬಾಬು, ಹಾರಗದ್ದೆ ಅಭಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.