ವಿಜಯಪುರ: ಕೊರೊನಾ ಸಂಕಷ್ಟದಿಂದಾಗಿ ಜೀವನ ನಿರ್ವಹಣೆ ಮಾಡಲಾಗದೆ ಪರದಾಡಿದವರಲ್ಲಿ ಆಟೊ, ಟೆಂಪೊ, ಟ್ಯಾಕ್ಸಿ ಚಾಲಕರು ಕೂಡ ಪ್ರಮುಖರು.
ಒಂದು ದಿನಕ್ಕೆ ಬೆಳಿಗ್ಗೆ 6ರಿಂದ ಸಂಜೆ 7ರವರೆಗೆ ದುಡಿದರೂ ₹200 ರೂಪಾಯಿ ದುಡಿಮೆ ಸಿಕ್ಕರೆ ಹೆಚ್ಚು ಎಂಬ ಸ್ಥಿತಿಗೆ ಬಂದು ನಿಂತಿದ್ದಾರೆ. 20ವರ್ಷಗಳಿಂದ ಆಟೊ ಓಡಿಸುವ ಕಾಯಕ ಮಾಡುತ್ತಿದ್ದೇನೆ. ಈಗ ಕೊರೊನಾ ಎರಡನೇ ಅಲೆ ಭೀತಿಯಿಂದ ಜನರು ಹೊರಗೆ ಬರುತ್ತಿಲ್ಲ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಮುನೇಗೌಡ.
’ಕೊರೊನಾ ಕಾಲದಲ್ಲಿ ತರಕಾರಿ ಮಾರಾಟ, ಎಳೆನೀರು ವ್ಯಾಪಾರ ಸೇರಿದಂತೆ ಎಲ್ಲ ರೀತಿಯ ಕೆಲಸ ಮಾಡಿದ್ದೇನೆ. ಶಾಲೆಯಲ್ಲಿ ಮಕ್ಕಳಿಗೆ ಶುಲ್ಕ ಪಾವತಿಸುವಂತೆ ಕೇಳಲಾಗುತ್ತಿದೆ. ಏನು ಮಾಡಲು ದಿಕ್ಕು ತೋಚದಂತಾಗಿದೆ’ ಎಂದು ಅಳಲು ತೋಡಿಕೊಂಡರು. ಸರ್ಕಾರ ಕಾರ್ಮಿಕರಿಗೆ ನೀಡಿದ ಪರಿಹಾರ ಎಲ್ಲರಿಗೂ ಸಿಗಲಿಲ್ಲ. ಕೆಲವರಿಗೆ ಸಿಕ್ಕರೂ ಅದು ಲಾಕ್ಡೌನ್ ಕಾಲದಲ್ಲೇ ಖರ್ಚಾಯಿತು. ಪರಿಹಾರ ರೂಪದಲ್ಲಿ ಅಲ್ಪಸ್ವಲ್ಪ ಸಹಾಯ ಮಾಡುವುದಕ್ಕಿಂತ ಒಂದು ನಿಗಮ ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕರಾದ ರಾಮಾಂಜಿ, ಮುನಿಕೃಷ್ಣ.
ಟೆಂಪೊ ಚಾಲಕ ದೇವರಾಜ್ ಮಾತನಾಡಿ, ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ವಾಪಸು ಪಾವತಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸಿ ತಾಣಗಳಿಗೆ ಜನರು ಹೋಗುವುದು ಹೆಚ್ಚಾಗಬೇಕು. ಬೆಂಗಳೂರು ಮೊದಲಿನಂತಾದರೆ ಬಾಡಿಗೆ ಸಿಗುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಆಟೊ ಚಾಲಕರ ಕಲ್ಯಾಣ ಮಂಡಳಿ ಸ್ಥಾಪಿಸಿ: ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ನೀಡಿದ ಪರಿಹಾರ ಬಹುತೇಕ ಆಟೊ ಚಾಲಕರಿಗೆ ಸಿಗಲೇ ಇಲ್ಲ. ಬ್ಯಾಡ್ಜ್ ಇಲ್ಲದಿರುವುದು ಹಾಗೂ ಆಟೊ ಚಾಲಕರು ಎಂದು ಗುರುತಿಸಲು ಸರ್ಕಾರ ರೂಪಿಸಿರುವ ಗೊಂದಲದ ನಿಯಮಗಳು ಕಾರಣವಾಗಿವೆ. ಶೇ80ರಷ್ಟು ಚಾಲಕರಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಇತರ ಕಾರ್ಮಿಕರ ಕಲ್ಯಾಣ ಮಂಡಳಿಯಂತೆ ಆಟೊ ಚಾಲಕರಿಗೂ ಕಲ್ಯಾಣ ಮಂಡಳಿ ಸ್ಥಾಪಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ಆಟೊ ಚಾಲಕ ಸುರೇಶ್ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.