ದೊಡ್ಡಬಳ್ಳಾಪುರ: ವಚನ ಸಾಹಿತ್ಯದ ಮೂಲಕ ಶರಣರು ಇಡೀ ಜಗತ್ತಿಗೆ ನೀಡಿದ ಜ್ಞಾನದ ಬೆಳಕಿನ ಮಹತ್ವ ಇಂದಿಗೂ ಪ್ರಸ್ತುತವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಹೆಗಡೆ ಹೇಳಿದರು.
ಅವರು ನಗರದಲ್ಲಿ ನಡೆದ ವಚನ ಸಾಹಿತ್ಯ ಸಂಗ್ರಹಿಸಿ, ರಕ್ಷಿಸಿದ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ವಚನ ಸಾಹಿತ್ಯ ಮೊದಲ ಓದಿಗೆ ಎಷ್ಟು ಸರಳವೋ ಅಷ್ಟೇ ಉನ್ನತ ಮಟ್ಟದ ಚಿತಂತನೆ ಒಳಗೊಂಡಿದೆ. ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಚನೆಯಾಗಿರುವ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ನಗರದ ಸದ್ಧರ್ಮ ದಾಸೋಹ ಬಸವೇಶ್ವರ ಮಠದ ಅಧ್ಯಕ್ಷರಾದ ನಿಶ್ಚಲ ನಿರಂಜನ ದೇಶಿಕೇಂದ್ರಸ್ವಾಮೀಜಿ ಮಾತನಾಡಿ, ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂಗ್ರಹಿಸಿ ಪರಿಷ್ಕರಣೆ ಮಾಡಿ ನೂರಾರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಇದು ಸಾಹಿತ್ಯ ಪ್ರಪಂಚದ ಮೈಲಿಗಲ್ಲಾಗಿದೆ. ಮನುಕುಲದ ಆಸ್ತಿ ಆಗಿರುವ ವಚನ ಸಾಹಿತ್ಯವನ್ನು ಎಲ್ಲರಿಗು ಅರ್ಥ ಮಾಡಿಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪ್ರೇಮಿಗಳ ಮೇಲಿದೆ ಎಂದರು.
ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಸವರಾಜಯ್ಯ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಮಹಾಲಿಂಗಯ್ಯ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜಯಣ್ಣ, ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಲತಾಆರಾಧ್ಯ, ತಾಲೂಕಿನ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಜಯ್, ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಭವ್ಯ ಇದ್ದರು.
ನಾರಾಯಣ, ರುದ್ರೇಶ್ ಅವರಿಂದ ವಚನ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.