ವಿಜಯಪುರ (ದೇವನಹಳ್ಳಿ): ವಚನ ಸಾಹಿತ್ಯಕ್ಕೆ ಫ.ಗು ಹಳಕಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ತಿಳಿಸಿದರು.
ಪಟ್ಟಣದ ಸಮೀಪದ ಕೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಯೋಜಿಸಿದ್ದ ಫ.ಗು ಹಳಕಟ್ಟಿ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, 12ನೇ ಶತಮಾನದ ಶರಣರ ವಚನಗಳನ್ನು ಕನ್ನಡ ನಾಡಿನ ಜನತೆಗೆ ಒದಗಿಸಿಕೊಟ್ಟ ಮಹನೀಯ ಹಳಕಟ್ಟಿ ಅವರು ವಚನ ಪಿತಾಮಹ ಎಂದೇ ಖ್ಯಾತರಾಗಿದ್ದಾರೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಚಿ.ಮಾ ಸುಧಾಕರ್ ಮಾತನಾಡಿ, ಶರಣರ ಸಮ ಸಮಾಜದ ಕಲ್ಪನೆ ಸಾಕಾರಗೊಳಿಸುವಲ್ಲಿ ಹಳಕಟ್ಟಿಯವರ ಶ್ರಮದ ಫಲವಾಗಿ ನಾವೆಲ್ಲ ಇಂದು ಶರಣರ ಎಲ್ಲ ವಚನಗಳನ್ನು ಓದಲು, ಅಧ್ಯಯನ ಮಾಡಲು, ಹಾಡಲು ಸಾಧ್ಯವಾಗಿದೆ ಎಂದರು.
ವಚನಗಳ ಒಗ್ಗೂಡುವಿಕೆಗಾಗಿ ತಮ್ಮ ತನು ಮನ ಧನ ವಿನಿಯೋಗಿಸಿ, ಆಧುನಿಕ ಭಾರತಕ್ಕೆ ವಚನ ಹೊತ್ತಿಗೆಯನ್ನು ನೀಡಿದರು. ಮುದ್ರಣಕ್ಕೆ ಆರ್ಥಿಕ ಸಮಸ್ಯೆಯಾದಾಗ ತಮ್ಮ ಸ್ವಂತ ಮನೆ ಮಾರಾಟ ಮಾಡಿ ವಚನಗಳನ್ನು ಪ್ರಕಟಿಸಿದರು. ಇಂತಹ ಮಹನೀಯರನ್ನು ನಾವು ಅತ್ಯಂತ ಪ್ರೀತಿಯಿಂದ ಸ್ಮರಿಸಬೇಕಾಗಿದೆ ಎಂದರು.
ಶಾಲಾ ಶಿಕ್ಷಕರಾದ ರಾಜಶೇಖರ್ ಆಚಾರಿ, ಗಿರಿಜಾಂಬಾ ರುದ್ರೇಶ್ ಮೂರ್ತಿ, ಪರಿಷತ್ತಿನ ಕಾರ್ಯದರ್ಶಿ ಮುನಿರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.