ಹೊಸಕೋಟೆ: ತಾಲ್ಲೂಕಿನ ಚಿಕ್ಕ ಕೊರಟಿ ಗ್ರಾಮದಲ್ಲಿ ಕೊರೊನಾ ಸೊಂಕು ಮುಕ್ತವಾದ ಎಂಟು ತಿಂಗಳ ಗರ್ಭಿಣಿಗೆ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೀಮಂತ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ಗೀತಾ, ‘8 ತಿಂಗಳ ಗರ್ಭಿಣಿಗೆ ಕೊರೊನಾ ಸೊಂಕು ದೃಢಪಟ್ಟಾಗ ಜಿಲ್ಲಾಡಳಿತ ಸವಾಲಾಗಿ ಸ್ವೀಕರಿಸಿ ಸೂಕ್ತ ಚಿಕಿತ್ಸೆ ಒದಗಿಸಿ 14 ದಿನಗಳಲ್ಲೇ ಸೋಂಕು ಮುಕ್ತಳಾಗಿ ಮನೆಗೆ ಬರುವಂತೆ ಮಾಡಲು ಸಾಧ್ಯವಾಗಿದೆ’ ಎಂದರು.
‘ಕೊರೊನಾ ದೃಢಪಟ್ಟಾಗ ಮಹಿಳೆಯ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದು ಆಕೆಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು. ತುಂಬು ಗರ್ಭಿಣಿಗೆ ತನ್ನವರು ಜೊತೆಯಲ್ಲಿ ಇಲ್ಲ ಅಥವಾ ತವರಿನ ನೆನಪಾಗಬಾರದೆಂದು ಜಿಲ್ಲಾಡಳಿತ ಈ ಕ್ರಮವನ್ನು ಮಾಡಿದೆ’ ಎಂದರು.
ಕೊರೊನಾ ಸೊಂಕು ಮುಕ್ತಳಾದ ಗರ್ಭಿಣಿ ಮಹಿಳೆ ಮಾತನಾಡಿ, ‘ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ಧೈರ್ಯ ತುಂಬಿ ಚಿಕಿತ್ಸೆ ನೀಡಿದ್ದರಿಂದ ಸೋಂಕು ಮುಕ್ತಳಾಗಿ ಆರೋಗ್ಯವಾಗಿ ಮನೆಗೆ ಬರಲು ಸಾಧ್ಯವಾಯಿತು. ಅಧಿಕಾರಿಗಳು ನನ್ನ ಕುಟುಂಬದವರಿಲ್ಲ ಎಂಬ ನೋವನ್ನು ಹೋಗಲಾಡಿಸಲು ನನಗೆ ಸೀಮಂತ ಮಾಡಿದ್ದು ನನಗೆ ಸಂತಸ ತಂದಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎನ್.ಬಿ. ಸಕ್ರಿ. ತಾಲ್ಲೂಕು ಆರೋಗ್ಯಾಧಿಕಾರಿ ಮಂಜುನಾಥ್, ಸಿಪಿಐ ರವೀಂದ್ರ, ಪಿಎಸೈ ಲಕ್ಷ್ಮಿನಾರಾಯಣ್, ಡಾ.ಭಾಸ್ಕರ್ ರೆಡ್ಡಿ, ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.