ಹೊಸಕೋಟೆ:‘ಕಳೆದ ಐದು ವರ್ಷಗಳಲ್ಲಿ ನಗರದ ಟೌನ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ತಮ್ಮ ಬೆಂಬಲಿಗರು ಉತ್ತಮ ಆಡಳಿತ ನಡೆಸಿದ್ದಾರೆ’ ಎಂದು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.
ಅವರು ನಗರದ ಅವಿಮುಕ್ತೇಶ್ವರ ದೇವಾಲಯದಲ್ಲಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೊಂದಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
‘ನಮ್ಮ ಬೆಂಬಲಿಗರು ಐದು ವರ್ಷಗಳಲ್ಲಿ ಯಾವುದೇ ದುಂದು ವೆಚ್ಚ ಮಾಡದೆ ಬ್ಯಾಂಕ್ನಿಂದ ಸಾರ್ವಜನಿಕರಿಗೆ ಸಾಕಷ್ಟು ಉತ್ತಮ ಸೇವೆ ಮಾಡಿಕೊಂಡು ಬಂದಿದ್ದಾರೆ. ಕಳೆದ ಸಾಲಿನಲ್ಲಿ ಆರು ಶಾಖೆಗಳನ್ನು ತೆರೆಯಲಾಗಿದೆ’ ಎಂದರು.
ಬ್ಯಾಂಕ್ ವಾರ್ಷಿಕ ವಹಿವಾಟು ₹250 ಕೋಟಿಗಳಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಖಾತೆದಾರರಿಗೆ ಎ.ಟಿ.ಎಂ. ಸೌಲಭ್ಯ ಒದಗಿಸಲಾಗುವುದು. ಹಲವಾರು ಅನುಕೂಲಗಳನ್ನು ಮಾಡಿ ಬ್ಯಾಂಕ್ ಮುಂದೆ ಉತ್ತಮ ಸಾರ್ವಜನಿಕ ಸಂಸ್ಥೆಯಾಗಿ ಬೆಳೆಯುವಂತೆ ಮಾಡುತ್ತೇವೆ. ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಬೆಂಬಲಿತ 13 ಅಭ್ಯರ್ಥಿಗಳನ್ನೂ ಗೆಲ್ಲಿಸಿ ಉತ್ತಮ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಅವರು ಷೇರುದಾರರಲ್ಲಿ ಮನವಿ ಮಾಡಿದರು.
ಜಯರಾಜ್ ಮನವಿ: ನಗರ ಬ್ಲಾಕ್ ನ ಬಿಜೆಪಿ ಅಧ್ಯಕ್ಷ ಸಿ. ಜಯರಾಜ್ ಮಾತನಾಡಿ, ₹80 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಬ್ಯಾಂಕ್ ವಹಿವಾಟು ₹250 ಕೋಟಿಗೆ ಏರಿದೆ. ₹11 ಕೋಟಿ ಲಾಭವೂ ಸೇರಿದಂತೆ 14 ಜನಕ್ಕೆ ಕೆಲಸ ಕೊಟ್ಟಿದೆ. ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದೆ. ಮುಂದಿನ ಅವದಿಗೆ ಚುನಾಯಿತರಾಗುವ ವಿಶ್ವಾಸವಿದೆ ಎಂದರು.
ಫೆ. 23 ರಂದು ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣೆಯು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ. 13 ಅಭ್ಯರ್ಥಿಗಳೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.