ಆನೇಕಲ್ : ತಾಲ್ಲೂಕಿನ ವಿವಿಧೆಡೆ ಮಂಗಳವಾರ ಭಾರಿ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯಿತು. ಮಳೆಯಿಂದಾಗಿ ಸಾರ್ವಜನಿಕರು ಪರದಾಡಿದರು. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಮಳೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.
ತಾಲ್ಲೂಕಿನ ಜಿಗಣಿಯಲ್ಲಿ ಬೆಳಗ್ಗೆಯಿಂದಲೂ ಮೋಡ ಮುಸುಕಿನ ವಾತಾವರಣ ಇತ್ತು. ಬೆಳಗ್ಗೆ 11 ಸುಮಾರಿಗೆ ಪ್ರಾರಂಭವಾದ ತುಂತುರು ಮಳೆಯು ಮಧ್ಯಾಹ್ನ 1ರ ಸುಮಾರಿಗೆ ಜೋರಾಯಿತು. ಎರಡು ಗಂಟೆಗೂ ಹೆಚ್ಚು ಸಮಯ ಮಳೆ ಆರ್ಭಟ ಹೆಚ್ಚಾಗಿತ್ತು. ಸಂಜೆ 4 ವೇಳಗೆ ಬಿಸಿಲು ಕಾಣಿಸಿ ಮತ್ತೆ ಮಳೆ ಪ್ರಾರಂಭವಾಯಿತು. ಇದರಿಂದಾಗಿ ಕೈಗಾರಿಕಾ ಪ್ರದೇಶದ ರಸ್ತೆಗಳು ಸಂಪೂರ್ಣ ನೀರಿನಿಂದ ತುಂಬಿತ್ತು.
ಆನೇಕಲ್ ಪಟ್ಟಣದಲ್ಲಿಯೂ ಸಂಜೆ 3ರ ಸುಮಾರಿಗೆ ಪ್ರಾರಂಭವಾದ ಮಳೆ ಸಂಜೆ 6ರವರೆಗೆ ಸುರಿಯಿತು. ಸಂಜೆ ಕೆಲಸದಿಂದ ಮನೆಗೆ ಹಿಂತಿರುಗಿದವರು ಪರದಾಡಿದರು. ಮಳೆಯಿಂದ ಚಂದಾಪುರ, ಜಿಗಣಿ, ಅತ್ತಿಬೆಲೆ ರಸ್ತೆಗಳು ಕೆರೆಯಂತಾಗಿತ್ತು. ದ್ವಿಚಕ್ರ ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಹುಡುಕುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.