ADVERTISEMENT

‘ಸರ್ಕಾರವೇ ವಯಸ್ಸಾದ ಹಸು ಖರೀದಿಸಲಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 7:25 IST
Last Updated 12 ಡಿಸೆಂಬರ್ 2020, 7:25 IST

ಸೂಲಿಬೆಲೆ: ವಯಸ್ಸಾದ ಮತ್ತು ಅಪಘಾತಕ್ಕೀಡಾದ ಗೋವುಗಳ ಪಾಲನೆಯು ಹೈನುಗಾರಿಕೆ ನಂಬಿರುವ ರೈತರಿಗೆ ಹೊರೆಯಾಗುತ್ತದೆ. ರೈತರಿಂದ ವಯಸ್ಸಾದ ಗೋವು ಖರೀದಿ ಮಾಡುವ ಕಾನೂನನ್ನು ಸರ್ಕಾರ ಮೊದಲು ಜಾರಿಗೊಳಿಸಬೇಕು. ನಂತರ ಗೋಹತ್ಯೆ ನಿಷೇಧ ಕಾನೂನಿಗೆ ಮುಂದಾಗಬೇಕು ಎಂದು ಪಟ್ಟಣದ ಕುರುಬರಪೇಟೆಯ ರೈತ ರಮೇಶ್ ಪ್ರತಿಕ್ರಿಯಿಸಿದರು.

ಹೊಸಕೋಟೆ ತಾಲ್ಲೂಕಿನಲ್ಲಿ 169 ಹಾಲು ಉತ್ಪಾದಕರ ಸಂಘಗಳಿವೆ. ಹಾಲು ಉತ್ಪಾದಕರ ಸಂಖ್ಯೆ 7,816. ಪ್ರತಿದಿನ 1,09,850 ಲೀಟರ್ ಹಾಲು ಕೆಎಂಎಫ್ ಕೇಂದ್ರಕ್ಕೆ ಸರಬರಾಜಾಗುತ್ತಿದೆ. ಕೃಷಿಯ ಜೊತೆಗೆ ಹೈನುಗಾರಿಕೆಯು ಅನೇಕ ರೈತರ ಉಪ ಕಸುಬಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯ ಜಾರಿಯಿಂದ ಹೈನುಗಾರಿಕೆ ಉದ್ಯಮಕ್ಕೆ ದೊಡ್ಡ ಪೆಟ್ಟಾಗಲಿದೆ ಎಂಬುದು ಹಲವು ರೈತರ ಅಭಿಪ್ರಾಯ.

ಸರ್ಕಾರ ರೈತರ ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಹೊರಟಿದೆ. ಈ ಹಿಂದೆ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಹಾಗೂ ರಸ್ತೆ ಅಭಿವೃದ್ಧಿಗೆಂದು ವಶಪಡಿಸಿಕೊಂಡು ರೈತರನ್ನು ಬೀದಿಪಾಲು ಮಾಡಿದೆ. ರೈತರಿಗೆ ಸಂಬಂಧಿಸಿದ ಕಾನೂನು ಜಾರಿಗೊಳಿಸುವ ಮೊದಲು ಅದರ ಆಗುಹೋಗುಗಳ ಕುರಿತು ರೈತರಿಂದ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು ಗಿಡ್ಡಪ್ಪನಹಳ್ಳಿಯ ರೈತ ಮುಖಂಡ ರಾಮಮೂರ್ತಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.