ADVERTISEMENT

ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಅನುಭವ

ಹಣಬೆ ಗ್ರಾಮದಲ್ಲಿ ಮೂರು ತಿಂಗಳ ಕಾಲ ವ್ಯವಸಾಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 4:41 IST
Last Updated 10 ನವೆಂಬರ್ 2022, 4:41 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ ಕಾರ್ಯಾನುಭವ’ದ ಅಂಗವಾಗಿ ವಿದ್ಯಾರ್ಥಿಗಳು ಏರೋಬಿಕ್‌ ಪದ್ದತಿಯಲ್ಲಿ ಬೆಳೆಸಿರುವ ಭತ್ತ
ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ‘ಗ್ರಾಮೀಣ ಕೃಷಿ ಕಾರ್ಯಾನುಭವ’ದ ಅಂಗವಾಗಿ ವಿದ್ಯಾರ್ಥಿಗಳು ಏರೋಬಿಕ್‌ ಪದ್ದತಿಯಲ್ಲಿ ಬೆಳೆಸಿರುವ ಭತ್ತ   

ದೊಡ್ಡಬಳ್ಳಾಪುರ: ಕೃಷಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ರೈತರ ತೋಟದಲ್ಲಿ ಮೂರು ತಿಂಗಳ ಕಾಲ ಇದ್ದು ತಾವೇ ಬೆಳೆ ಬೆಳೆದು ತೋರಿಸುವ ಕ್ರಮ ಅತ್ಯಂತ ಮಹತ್ವದ್ದು. ತರಗತಿಗಳಲ್ಲಿ ಕಲಿತ ಪಾಠವನ್ನು ರೈತರ ಹೊಲದಲ್ಲಿ ಮಾಡಿ ತೋರಿಸುವುದು ಕಷ್ಟವು ಹೌದು, ಖುಷಿಯು ಸಂಗತಿಯು ಹೌದು.

ಹೀಗೆ ಅನುಭವ ಹಂಚಿಕೊಂಡವರು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.

ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ಮೂರು ತಿಂಗಳ ಕಾಲ ‘ಗ್ರಾಮೀಣ ಕೃಷಿ ಕಾರ್ಯಾನುಭವದ ಅನುಭವ’ ಕಾರ್ಯ್ರಮದಲ್ಲಿ ಈ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರು.

ADVERTISEMENT

ನೀರು ನಿಲ್ಲಿಸಿಯೇ ಭತ್ತ ಬೇಳೆಯಬೇಕು ಎನ್ನುವ ಪದ್ಧತಿ ಬಿಟ್ಟು, ಹದವಾಗಿ ನೀರು ಹಾಯಿಸಿಯು ಏರೋಬಿಕ್‌ ಪದ್ಧತಿಯಲ್ಲಿ ಭತ್ತ ಬೆಳೆದಿದ್ದೇವೆ. ಇದೇ ರೀತಿ ವಿವಿಧ ತರಕಾರಿ, ಸೂರ್ಯಕಾತಿ, ವಿವಿಧ ತಳಿಯ ಮುಸುಕಿನಜೋಳ ಬೆಳೆಯಲಾಗಿದೆ. ಬೆಳೆಗಳಿಗೆ ಬರುವ ಕೀಟ, ರೋಗಗಳು, ಇವುಗಳ ನಿಯಂತ್ರಣ ಕ್ರಮಗಳನ್ನು ಪ್ರಾಯೋಗಿಕವಾಗಿ ನೋಡಿ ತಿಳಿಯಲು ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಮೀಣ ಕೃಷಿ ಕಾರ್ಯಾನುಭವನದ ವಿದ್ಯಾರ್ಥಿ ಯಾದಗಿರಿ ತಾಲ್ಲೂಕಿನ ಸದಾನಂದ್‌.

ಅತ್ಯಂತ ಬಿಸಿಲಿನ ವಾತಾವರಣದಲ್ಲಿ ಬೆಳೆ ಬೆಳೆಯುವುದನ್ನು ನೋಡಿರುವ ನಮಗೆ ಕರ್ನಾಟಕದಲ್ಲಿ ವಾತಾವರಣವನ್ನು ನೋಡಿದರೆ ಅತ್ಯಂಕ ಖುಷಿಯಾಗುತ್ತದೆ. ಇಲ್ಲಿನ ವಾತಾವರಣದಲ್ಲಿ ಕಣ್ಣಿಗೆ ಬೇಕಾದ ಬೆಳೆಯನ್ನು ಬೆಳೆಯುವ ಅವಕಾಶ ಇದೆ. ಹಾಗೆಯೇ ಇಲ್ಲಿನ ರೈತರು ಸಹ ಈ ವಾತಾವರಣ, ಮಣ್ಣು, ನೀರಿನ ಲಭ್ಯತೆಯನ್ನು ಅತ್ಯಂತ ಸಮರ್ಪಕವಾಗಿ ಬೆಳಸಿಕೊಂಡು ಬೇಸಾಯ ಮಾಡುತ್ತಿರುವುದನ್ನು ನೋಡಿ ಕಲಿಯಬೇಕಾಗಿದೆ ಎನ್ನುತ್ತಾರೆ ರಾಜಸ್ತಾನ ರಾಜ್ಯದಿಂದ ಅಂತರ ರಾಜ್ಯ ಫೇಲೋಶಿಪ್‌ ಕೋಟಾದಲ್ಲಿ ಜಿಕೆವಿಕೆಯಲ್ಲಿ ಕೃಷಿ ವಿಜ್ಞಾನ ಓದುತ್ತಿರುವ ಹಾಗೂ ತಿಂಗಳ ‘ಗ್ರಾಮೀಣ ಕೃಷಿ ಕಾರ್ಯಾನುಭವ’ ವಿದ್ಯಾರ್ಥಿಗಳ ತಂಡದ ನಾಯಕ ಮುಖೇಶ್‌ವರ್ಮ.

ಹಣಬೆ ಗ್ರಾಮದಲ್ಲಿ ನಡೆಯುತ್ತಿರುವ ಮೂರು ತಿಂಗಳ ‘ಗ್ರಾಮೀಣ ಕೃಷಿ ಕಾರ್ಯಾನುಭವ’ದಲ್ಲಿ ಓಡಿಸಾ, ಜಾರ್ಖಂಡ್‌, ಉತ್ತಾರಾಖಂಡ್‌ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಲ್ಲಿನ ಕೃಷಿ ಪದ್ಧತಿ ತಿಳಿಯುವುದರ ಜೊತೆಗೆ ಅಲ್ಲಿನ ಕೃಷಿ ಪದ್ಧತಿಗಳು, ನೀರು, ಗೊಬ್ಬರಗಳ ಬಳಕೆ ಕುರಿತಂತೆ ‘ಗ್ರಾಮೀಣ ಕೃಷಿ ಕಾರ್ಯಾನುಭವ’ದಲ್ಲಿನ ವಿದ್ಯಾರ್ಥಿಗಳೊಂದಿಗೂ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರತಿ ದಿನ ಸಂಜೆ ಹಣಬೆ ಗ್ರಾಮದಲ್ಲಿ ರೈತರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸುವ ಮೂಲಕ ರೈತರ ಕೃಷಿ ಜ್ಞಾನವನ್ನು ತಿಳಿದಿಕೊಳ್ಳುತ್ತಿದ್ದಾರೆ. ಹಾಗೆಯೇ ಜಿಕೆವಿಕೆಯಲ್ಲಿನ ಕೃಷಿ ತಜ್ಞರಿಂದ ಕೃಷಿಯಲ್ಲಿ ಅನುಸರಿಸಬೇಕಿರುವ ವಿಧಾನಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇಂದು ಸಮಾರೋಪ

ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿದ್ಯಾನಿಲಯದ ವತಿಯಿಂದ ನಡೆದ ಗ್ರಾಮೀಣ ಕೃಷಿ ಕಾರ್ಯಾನುಭವ ಸಮಾರೋಪ ಸಮಾರಂಭದ ಅಂಗವಾಗಿ ಕೃಷಿ ಮೇಳ, ವಸ್ತು ಪ್ರದರ್ಶನ ಮತ್ತು ವಿಚಾರ ಗೋಷ್ಠಿಗಳು ನ.10 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿವೆ.

ಶಾಸಕ ಟಿ.ವೆಂಕಟರಮಣಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಕೆಪಿಸಿಸಿ ಸದಸ್ಯ ಆರ್‌.ಜಿ.ವೆಂಕಟಾಚಲಯ್ಯ ಉದ್ಘಾಟಿಸಲಿದ್ದಾರೆ. ಬೆಳೆ ಸಂಗ್ರಹಾಲಯವನ್ನು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಸ್‌.ವಿ.ಸುರೇಶ್‌ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಹಣಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.