ದೊಡ್ಡಬಳ್ಳಾಪುರ: 2010-11ನೇ ಸಾಲಿನಿಂದ 2017-18ರವರೆಗೂ ಮತಗಟ್ಟೆ ಅಧಿಕಾರಿ(ಬಿಎಲ್ಒ)ಗಳಾಗಿ ಕರ್ತವ್ಯ ನಿರ್ವಹಿಸಿರುವ 280ಕ್ಕೂ ಹೆಚ್ಚು ಜನರಿಗೆ ಗಳಿಕೆ ರಜೆ ಸೌಲಭ್ಯ ಮಂಜೂರು ಮಾಡುವಂತೆ ತಹಶೀಲ್ದಾರ್ ಎಂ.ಕೆ.ರಮೇಶ್ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆಂಜಿನಪ್ಪ, ಶಿಕ್ಷಕರ ಸಂಘದ ಎಚ್.ಕೆ.ನಟರಾಜ ಅವರು ಮನವಿ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ದಿನಾಚರಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿ ಕೆಲಸ ನಿರ್ವಹಣೆಯಲ್ಲೂ ಬಿಎಲ್ಒಗಳದ್ದೇ ಹೆಚ್ಚಿನ ಕೆಲಸವಾಗಿರುತ್ತದೆ. ಕೆಸಿಎಸ್ಆರ್ ನಿಯಮಾವಳಿ ಪ್ರಕಾರ ವಾರ್ಷಿಕ ಕೇವಲ ಹತ್ತು ಗಳಿಕೆ ರಜೆ ಮಾತ್ರ ಶಿಕ್ಷಕರಿಗೆ ವಿಳಂಬವಾಗುತ್ತದೆ.
ಬೇಸಿಗೆ ರಜೆಯಲ್ಲೂ ಸಹ ಶಿಕ್ಷಕರು ರಜೆ ಹಾಕದೆ ಕೆಲಸ ನಿರ್ವಹಿಸುತ್ತಾರೆ. ಆದರೆ, ಗಳಿಕೆ ರಜೆ ಮಾತ್ರ ಶಿಕ್ಷಕರಿಗೆ ದೊರೆಯುತ್ತಿಲ್ಲ. ಆದರೆ, ರಾಜ್ಯದ ಇತರ ಜಿಲ್ಲೆಗಳ ಕೆಲ ತಾಲ್ಲೂಕುಗಳಲ್ಲಿ 2017-18ನೇ ಸಾಲಿನವರೆಗೂ ಗಳಿಕೆ ರಜೆ ಮಂಜೂರು ಮಾಡಲಾಗಿದೆ. ಇದೇ ರೀತಿ ತಾಲ್ಲೂಕಿನ ಬಿಎಲ್ಒಗಳಿಗೆ ಗಳಿಕೆ ರಜೆ ಮಂಜೂರು ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.