ವಿಜಯಪುರ: ‘ಪುರಸಭೆ ಚುನಾವಣೆಯಲ್ಲಿ ಭಾಗವಹಿಸಿದೆ ಇರುವುದಕ್ಕೆ ಕಾಂಗ್ರೆಸ್ನ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷದ ಹಿನ್ನಡೆಗೆ ಮುಖಂಡರ ಗುಂಪುಗಾರಿಕೆ ಕಾರಣವೇ ಹೊರತು ಅಭ್ಯರ್ಥಿಗಳಲ್ಲ’ ಎಂದು 12ನೇ ವಾರ್ಡ್ ಸದಸ್ಯ ವಿ. ನಂದಕುಮಾರ್
ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಗೆ ಚುನಾವಣೆ ನಡೆದು 5 ತಿಂಗಳು ಕಳೆದಿದೆ. ಚುನಾವಣೆಯಲ್ಲಿ 7 ಮಂದಿ ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದೇವೆ. ಇದುವರೆಗೂ ಒಬ್ಬ ಮುಖಂಡರು ಕೂಡ ಸದಸ್ಯರನ್ನು ಕರೆದು ಒಂದು ಸಭೆ ಮಾಡಿಲ್ಲ. ಕಷ್ಟ, ಸುಖ ವಿಚಾರಿಸಿಲ್ಲ. ‘ಬಿ’ ಫಾರಂ ಕೊಟ್ಟು ಹೋದವರು ಒಬ್ಬರೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರಲಿಲ್ಲ ಎಂದು ದೂರಿದರು.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಸಭೆ ಕರೆದಿದ್ದರು. ಆದರೆ, ಯಾವ ಉದ್ದೇಶಕ್ಕಾಗಿ ಸಭೆ ಕರೆಯಲಾಗಿದೆ ಎನ್ನುವ ಬಗ್ಗೆ ತಿಳಿಸಿರಲಿಲ್ಲ. ಮೊದಲ ದಿನ ಸಭೆಗೆ ಹೋಗಿರಲಿಲ್ಲ. ಯಾರೂ ಕೂಡ ಸಭೆಗೆ ಯಾಕೆ ಬಂದಿಲ್ಲ ಎಂದು ಕೇಳಿಲ್ಲ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಫೋನ್ ಮಾಡಿ ಇಂದು ಸಭೆ ಇದೆ ಬರಬೇಕು ಎಂದಷ್ಟೇ ಹೇಳಿದ್ದರು. ಸಭೆ ಎಲ್ಲಿ ಕರೆದಿದ್ದಾರೆ, ಯಾವ ಕಾರಣಕ್ಕಾಗಿ ಕರೆಯಲಾಗಿದೆ ಎನ್ನುವುದನ್ನೂ ಹೇಳಲಿಲ್ಲ
ಎಂದರು.
ಪಕ್ಷದ ಸದಸ್ಯರೊಬ್ಬರು ನಂದಿನಿ ಶಾಲೆಯಲ್ಲಿ ಸಭೆ ಎಂದು ತಿಳಿಸಿದ್ದರಿಂದ ಅಲ್ಲಿಗೆ ಹೋಗಿದ್ದೇವು. ಮಾಜಿ ಶಾಸಕರಾಗಲಿ, ಪಕ್ಷದ ಅಧ್ಯಕ್ಷರಾಗಲಿ ಯಾರೂ ಕೂಡ ಪುನಃ ದೂರವಾಣಿ ಕರೆ ಮಾಡಿ ಕರೆಯಲಿಲ್ಲ. ಮತ ಹಾಕುವಂತೆ ಒಂದು ಮಾತೂ ಕೇಳಲಿಲ್ಲ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.