
ವಿಜಯಪುರ (ದೇವನಹಳ್ಳಿ): ಹನುಮ ಜಯಂತಿ ಪ್ರಯುಕ್ತ ಮಂಗಳವಾರ ಪಟ್ಟಣ ಮತ್ತು ಗ್ರಾಮೀಣ ಭಾಗದ ವಿವಿಧ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಧಾರ್ಮಿಕ ಕೈಂಕರ್ಯಗಳು ಶ್ರದ್ಧಾ,ಭಕ್ತಿಯಿಂದ ಜರುಗಿದವು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಪಟ್ಟಣದ ದೇವನಹಳ್ಳಿ ರಸ್ತೆಯ ಅಭಯ ವೀರಾಂಜನೇಯ, ಆನೆಛತ್ರದ ಬಳಿಯ ವೀರಾಂಜನೇಯ, ಕೆರೆಕೋಡಿ ಬಳಿಯ ಪಂಚಮುಖಿ ಆಂಜನೇಯ, ಬೈಪಾಸ್ ರಸ್ತೆಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು.
ಆಂಜನೇಯ ದೇವರ ಮೂರ್ತಿಗಳಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆದವು.
ಹೋಬಳಿಯ ವೆಂಕಟೇನಹಳ್ಳಿ, ಪುರ, ಕೊಮ್ಮಸಂದ್ರ, ಗೊಡ್ಲುಮುದ್ದೇನಹಳ್ಳಿ, ಯಲುವಹಳ್ಳಿ, ಧರ್ಮಪುರ, ಮಂಡಿಬಲೆ, ಗಡ್ಡದನಾಯಕನಹಳ್ಳಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕಾರ್ಯಗಳು ನಡೆದವು.
ಭಕ್ತ ಗಣ ಬೆಳಿಗ್ಗೆಯಿಂದಲೇ ಹನುಮ ದೇಗುಲಗಳಿಗೆ ಭೇಟಿ ನೀಡಿ ಸರದಿ ಸಾಲಿನಲ್ಲಿ ನಿಂತು ದೇವರಿಗೆ ಅರಿಶಿಣ-ಕುಂಕುಮ, ಎಲೆ, ಅಡಿಕೆ, ಕಾಯಿ ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಭಜನೆ ಮೂಲಕ ವಾಯುಪುತ್ರನ ಸ್ಮರಿಸಿದರು.
ಸಂಜೆ ಭಕ್ತಿಗೀತೆಗಳ ಗಾಯನ ಏರ್ಪಡಿಸಲಾಗಿತ್ತು. ದೇಗುಲಗಳಲ್ಲಿ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಭಕ್ತರು ಬಂದು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.