ವಿಜಯಪುರ ಹೋಬಳಿ ಹೊಲೇರಹಳ್ಳಿ ಗ್ರಾಮದಲ್ಲಿ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ವತಿಯಿಂದ ಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು
ವಿಜಯಪುರ(ದೇವನಹಳ್ಳಿ): ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿಯಲ್ಲಿ ಶನಿವಾರ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರು.
ನೂರಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 150 ಮಂದಿ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ, ಜನರಿಗೆ ಇರುವ ರೋಗಗಳ ಕುರಿತು ಸಮಾಲೋಚನೆ ನಡೆಸಿದರು.
ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ಸಮುದಾಯ ಆರೋಗ್ಯ ಸಹಾಯಕ ಪ್ರಾಧ್ಯಾಪಕ ಡಾ.ದಿನೇಶ್ ರಾಜಾರಾಂ ಮಾತನಾಡಿ, ಆಸ್ಪತ್ರೆಯ ವತಿಯಿಂದ ಹೊಲೇರಹಳ್ಳಿ ಗ್ರಾಮವನ್ನು ಐದು ವರ್ಷಗಳ ಕಾಲ ದತ್ತು ಪಡೆಯಲಾಗುತ್ತದೆ. ಒಬ್ಬ ವಿದ್ಯಾರ್ಥಿಗೆ ಐದು ಮನೆಗಳ ಉಸ್ತುವಾರಿ ಕೊಡಲಾಗುತ್ತದೆ. ಐದು ಕುಟುಂಬಗಳಲ್ಲಿರುವ ಜನರ ಸಂಪೂರ್ಣ ಆರೋಗ್ಯ ಹೊಣೆಗಾರಿಕೆಯನ್ನು ಈ ವಿದ್ಯಾರ್ಥಿಗಳು ನೋಡಿಕೊಳ್ಳಲಿದ್ದಾರೆ. ಅವರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿ ಬಾರಿ ಭೇಟಿಯ ಸಮಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ. ಆರೋಗ್ಯ ಸುಧಾರಣೆಯ ಕುರಿತು ಅರಿವು ಮೂಡಿಸಲಿದ್ದೇವೆ. ಸ್ತ್ರೀರೋಗ, ಹೃದಯ ಸಂಬಂಧಿ ಕಾಯಿಲೆಗಳು, ಮದ್ಯಪಾನ, ಧೂಮಪಾನದಿಂದ ಆಗುವಂತಹ ದುಷ್ಪರಿಣಾಮ, ಕ್ಷಯರೋಗ ನಿಯಂತ್ರಣ, ಹಾಗೂ ಮಕ್ಕಳಿಗೆ ಬರುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತದೆ. ಇಂತಹ ರೋಗಿಗಳಿಗೆ ಶೇ 80 ರಷ್ಟು ರಿಯಾಯಿತಿ ಇರಲಿದೆ ಎಂದರು.
ಡಾ.ಸುಮನ್, ಡಾ.ಪವಿತ್ರ, ಡಾ.ರಂಜಿತ್, ಡಾ.ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.