ADVERTISEMENT

ರಾಷ್ಟ್ರೀಯ ಹಿಂದೂ ಸ್ವಾಭಿಮಾನಿ ಸಂಘ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 15:50 IST
Last Updated 9 ಸೆಪ್ಟೆಂಬರ್ 2020, 15:50 IST
ನೂತನ ರಾಜ್ಯಾಧ್ಯಕ್ಷ ಸಾಜನ್ ದೇವಾನಿ
ನೂತನ ರಾಜ್ಯಾಧ್ಯಕ್ಷ ಸಾಜನ್ ದೇವಾನಿ   

ದೇವನಹಳ್ಳಿ: ‘ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಹಿಂದೂ ಸ್ವಾಭಿಮಾನಿ ಸಂಘ ಅಸ್ತಿತ್ವಕ್ಕೆ ತರಲಾಗಿದೆ’ ಎಂದು ಸಂಘದ ನೂತನ ರಾಜ್ಯ ಘಟಕ ಅಧ್ಯಕ್ಷ ಸಾಜನ್ ದೇವಾನಿ ಹೇಳಿದರು.

ಇಲ್ಲಿನ ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಹಿಂದೂ ಸ್ವಾಭಿಮಾನಿ ಸಂಘ ಎಂಬುದು ಬಿಜೆಪಿ, ವಿಶ್ವಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಅಂಗ ಸಂಸ್ಥೆಯಾಗಿ ಸಮನ್ವಯತೆಯಿಂದ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದೆ. ದೇಶದಲ್ಲಿ ಮೊದಲ ಬಾರಿಗೆ 2015ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಆರಂಭಗೊಂಡು ಕೇಂದ್ರ ಕಚೇರಿ ಹೊಂದಿರುವ ಸಂಘ ಈಗಾಗಲೇ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಸಕ್ರಿಯವಾಗಿದೆ’ ಎಂದು ಹೇಳಿದರು.

‘ನಾನು ಎರಡು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ರಾಜ್ಯಮಟ್ಟದ ಅಧ್ಯಕ್ಷ ಸ್ಥಾನದ ನೇಮಕ ಪತ್ರ ಕಳುಹಿಸಿ ಮೊಬೈಲ್ ಕರೆ ಮಾಡಿದಾಗ ಆಶ್ಚರ್ಯವಾಗಿತ್ತು. ಪ್ರಸ್ತುತ ರಾಜ್ಯಮಟ್ಟದ ಸಂಘದ ಕಾರ್ಯಕಾರಿಣಿಯ ಪದಾಧಿಕಾರಿಗಳ ನೇಮಕ ಮಾಡಬೇಕು. ರಾಜ್ಯ ಪ್ರವಾಸ ಮಾಡಿ 30 ಜಿಲ್ಲೆಯ ಅಧ್ಯಕ್ಷರನ್ನು ನೇಮಕ ಮಾಡಬೇಕು. ತ್ವರಿತವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರನ್ನು ನೇಮಕ ಮಾಡುವಂತೆ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಿದ್ಧಾರ್ಥ ಶರ್ಮ ಅದೇಶ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸಂಘದ ಮೂಲ ಉದ್ದೇಶ ಹಿಂದೂ ಧರ್ಮದ ರಕ್ಷಣೆ ಮತ್ತು ಹಿಂದೂ ಧಾರ್ಮಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ಉಳಿಸುವುದು, ಹಿಂದೂ ದೇವಾಲಯಗಳಿಗೆ ಅಪಾಯವಾಗದಂತೆ ತಡೆಯುವುದು, ಧಾರ್ಮಿಕ ಆಚರಣೆಗೆ ಅಡ್ಡಿಯಾದರೆ ಹೋರಾಟ ನಡೆಸುವುದು, ಹಿಂದೂ ಧರ್ಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಹಿಂದೂಗಳ ಬಗ್ಗೆ ಮತ್ತು ಹಿಂದೂ ಪರಂಪರೆ ಬಗ್ಗೆ ಅವಹೇಳನಕಾರಿ ಹೇಳಿಕೆ, ಪ್ರಚೋದನಕಾರಿ ಭಾಷಣ, ತಡೆಯುವುದು ಹಿಂದೂ ಪ್ರಗತಿ ಪರ ಹೋರಾಟಗಳಿಗೆ ಬೆಂಬಲಿಸುವುದು ಇದರ ಉದ್ದೇಶವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.