ADVERTISEMENT

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಸಾರ್ವಕಾಲಿಕ ಅನಿವಾರ್ಯ

ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 15:00 IST
Last Updated 22 ಡಿಸೆಂಬರ್ 2023, 15:00 IST
ಹೊಸಕೋಟೆ ತಾಲ್ಲೂಕಿನ ನಿಂಬೇಕಾಯಿಪುರದ ಜನಪದರು ಸಾಂಸ್ಕೃತಿಕ ವೇದಿಕೆಯಲ್ಲಿ ಶಿವಸಂಚಾರ ನಾಟಕೋತ್ಸವದಲ್ಲಿ ‘ಕಲ್ಯಾಣ ಬಾಗಿಲು’ ನಾಟಕ ಪ್ರದರ್ಶನ ಗಮನ ಸೆಳೆಯಿತು
ಹೊಸಕೋಟೆ ತಾಲ್ಲೂಕಿನ ನಿಂಬೇಕಾಯಿಪುರದ ಜನಪದರು ಸಾಂಸ್ಕೃತಿಕ ವೇದಿಕೆಯಲ್ಲಿ ಶಿವಸಂಚಾರ ನಾಟಕೋತ್ಸವದಲ್ಲಿ ‘ಕಲ್ಯಾಣ ಬಾಗಿಲು’ ನಾಟಕ ಪ್ರದರ್ಶನ ಗಮನ ಸೆಳೆಯಿತು   

ಹೊಸಕೋಟೆ: ತಾಲ್ಲೂಕಿನ ನಿಂಬೇಕಾಯಿಪುರ ಗ್ರಾಮದ ಬಳಿ ಇರುವ ಜನಪದರು ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸಿದ್ದ 2023ರ ಶಿವಸಂಚಾರ ಸಾಣೆಹಳ್ಳಿಯ ಮೂರು ದಿನಗಳ ನಾಟಕೋತ್ಸವಕ್ಕೆ ಗುರುವಾರ ತೆರೆಬಿದ್ದಿತು.

ಸಮಾರಂಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ.ವೆಂಕಟರಮಣಪ್ಪ ಅವರು, `ನಿರಂತರ ಬದಲಾವಣೆಯ ಈ ಜಗದ ನಿಯಮ. ಈ ಬದಲಾವಣೆಯಲ್ಲಿ ಸಾಂಸ್ಕೃತಿಕ ಚಳುವಳಿ ಪ್ರಮುಖ ಪಾತ್ರ ವಹಿಸಿದೆ. ಇದರ ಅಂಗವಾಗಿ ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವ ನಡೆಸುತ್ತಿದೆ ಎಂದರು.

ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆಗೆ ಕಾರಣಕರ್ತರಾದ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಅಂಬೇಡ್ಕರ್ ಅವರು ಎಂದೆಂದಿಗೂ ದೇಶಕ್ಕೆ ಅನಿವಾರ್ಯವಾಗುತ್ತಾರೆ. ಅವರ ಮೂಲಕವೇ ಈ ದೇಶ ಸಮಾನತೆಯಿಂದ ಉಸಿರಾಡುವ ಸಾಧ್ಯ. ಆದ್ದರಿಂದ ಇವರ ಸಿದ್ಧಾಂತ ಎಲ್ಲೆಡೆ ಪಸರಿಸುವ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ಮೂರು ದಿನಗಳ ನಾಟಕೋತ್ಸವದಲ್ಲಿ ಜಯಂತ್ ಕಾಯ್ಕಿಣಿ ಅವರ ರಚನೆಯ ಹುಲುಗಪ್ಪ ಕಟ್ಟೀಮನಿ ಅವರ ನಿರ್ದೇಶನದ ‘ಜೊತೆಗಿರುವನು ಚಂದಿರ’, ಎರಡನೇ ದಿನದ ನಾಟಕವಾಗಿ ಕೆ.ಎನ್.ಸಾಳುಂಕೆ ರಚನೆಯ ಮಾಲತೇಶ ಬಡಿಗೇರ ನಿರ್ದೇಶನದ ‘ತಾಳಿಯ ತಕರಾರು’ ಮತ್ತು ಮೂರನೆ ಮತ್ತು ಕೊನೆಯ ನಾಟಕವಾಗಿ ನಟರಾಜ್ ಬೂದಾಳ್ ಅವರ ‘ಕಲ್ಯಾಣದ ಬಾಗಿಲು’ ನಾಟಕ ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ರಂಗಭೂಮಿ ಕಲಾವಿದರು ಮತ್ತು ನಿರ್ದೇಶಕರನ್ನು ಸನ್ಮಾನಿಸಲಾಯಿತು. ನಾಟಕದ ಬಗ್ಗೆ ಹಿರಿಯ ಪ್ರೇಕ್ಷಕರು ವಿಮೆರ್ಶೆಯ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಜನಪದರು ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಸಿದ್ಧೇಶ್ವರ ನನಸು ಮನೆ, ಎಂ.ಸುರೇಶ. ಚಲಪತಿ, ಮುನಿರಾಜು ಅಗ್ರಹಾರ ಹಾಜರಿದ್ದರು.

ನಾಟಕೋತ್ಸವದಲ್ಲಿ ಕಲಾವಿದರನ್ನು ಅಭಿನಂದಿಸಿದ ಜನಪದರು ಸಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.