ಹೊಸಕೋಟೆ: ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಬಗೆಹರಿಸಲು ಸಾಧ್ಯವಾಗದಷ್ಟು ಸಮಸ್ಯೆಗಳಿದ್ದರೂ ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಅವರು ಜನರ ಸಮಸ್ಯೆ ಆಲಿಸುತ್ತಿಲ್ಲ. ಸಮಸ್ಯೆ ಹೇಳಲು ನಗರಸಭೆಗೆ ಬರುವ ಜನಸಾಮಾನ್ಯರ ಕೈಗೂ ಸಿಗುತ್ತಿಲ್ಲ ಎಂದು ಎಂದು ಬಿಜೆಪಿ ಮುಖಂಡ ಕೆ.ಆರ್.ಬಿ. ಶಿವಾನಂದ್ ಆರೋಪಿಸಿದರು.
ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ಅವರು ಕೇವಲ ವಾಟ್ಸ್ಆ್ಯಪ್, ಫೇಸ್ಬುಕ್ ಪ್ರಚಾರಕ್ಕೆ ಸೀಮಿತವಾಗಿದ್ದಾರೆ. ಎರಡು ಮೂರು ತಿಂಗಳಿನಿಂದ ನಗರಸಭೆ ಕಚೇರಿಯಲ್ಲಿ ಯಾವ ಅಧಿಕಾರಿಗಳು ಸರಿಯಾಗಿ ಜನ ಸಾಮಾನ್ಯರಿಗೆ ಸಿಗುತ್ತಿಲ್ಲ. ಇದರಿಂದ ಅಹವಾಲು ಸಲ್ಲಿಸಲು ಆಗಗುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಳೆದ ಎರಡು–ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲೇ ಹೊಳೆಯಂತೆ ಮಳೆ ನೀರು ಹರಿಯುತ್ತಿದೆ. ರಾಜಕಾಲುವೆಗಳು ತುಂಬಿ ಮನೆಗಳಿಗೆ ಹರಿಯುತ್ತಿದ್ದು, ಜನ ಪರದಾಡುತ್ತಿದ್ದಾರೆ. ಇದರ ಬಗ್ಗೆ ಅಧ್ಯಕ್ಷರಾದವರು ಲಕ್ಷ್ಯ ಕೊಡುತ್ತಿಲ್ಲ. 11 ತಿಂಗಳಿಂದ ಇಲ್ಲಿಯವೆರೆಗೂ ಒಂದು ದಲಿತ ಕೇರಿಗೂ ಭೇಟಿ ನೀಡಿ, ಜನ ಸಮಸ್ಯೆ ಕೇಳಿಲ್ಲ ಎಂದು ಆರೋಪಿಸಿದರು.
ಸರ್ಕಾರ ಮನೆ ಬಾಗಿಲಿಗೆ ಇ–ಖಾತೆ ಎಂದು ಅಭಿಯಾನ ಮಾಡುತ್ತಿದೆ. ಆದರೆ ಹೊಸಕೋಟೆಯಲ್ಲಿ ಮಾತ್ರ ಇ-ಖಾತೆಗಾಗಿ ಜನರು ನಗರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಹಾಗೂ ನೀರು, ಕಸದ ಸಮಸ್ಯೆ ಹೇಳಲು ಅಧ್ಯಕ್ಷರೆ ಕಾಣುತ್ತಿಲ್ಲ. ಹಾಗಾದರೆ ಕುಂದು ಕೊರತೆ ಯಾರಿಗೆ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.