ಹೊಸಕೋಟೆ: ತಾಲ್ಲೂಕಿನ ಕಸಬಾ ಹೋಬಳಿ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ನಡವತ್ತಿ ಗ್ರಾಮದ ಕಾಲನಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವರ್ಷಗಳಿಂದ ವಾಸ ಮಾಡುತ್ತಿರುವ ನಿವಾಸಿಗಳು ತಮ್ಮ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಅವರಿಗೆ ಮನವಿ ಮಾಡಿದರು.
ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಶಾಸಕರನ್ನು ನಡವತ್ತಿ ದಲಿತ ಕಾಲನಿಯ ನಿವಾಸಿ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಸದಸ್ಯರು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ನಡವತ್ತಿ ಗ್ರಾಮದ ಗೋಮಾಳ ಜಮೀನಲ್ಲಿ 250 ಹೆಚ್ಚು ಕುಟುಂಬಗಳು ಸುಮಾರು 40ಕ್ಕೂ ಹೆಚ್ಚು ವರ್ಷದಿಂದ ವಾಸಿಸುತ್ತಿವೆ. ಈ ಜಮೀನನ್ನು ಗ್ರಾಮ ಠಾಣೆಗೆ ಸೇರಿಸಿ, ಹಕ್ಕು ಪತ್ರ ನೀಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಯಾರಿಂದಲೂ ಸೂಕ್ತ ದೊರೆಯುತ್ತಿಲ್ಲ ಎಂದು ಅವಲತ್ತುಕೊಂಡರು.
ಮನವಿ ಸ್ವೀಕರಿಸಿದ ಶಾಸಕ ಶರತ್ ಬಚ್ಚೇಗೌಡ, ನಡವತ್ತಿ ಕಾಲನಿಯ ನಿವಾಸಿಗಳು ತಾವು ವಾಸಿಸುತ್ತಿರುವ ಮನೆಗಳ ಹಕ್ಕುಪತ್ರ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್, ಮುಖಂಡರಾದ ಕೋಡಿಹಳ್ಳಿ ಸುರೇಶ್, ಪೂಜೇನಅಗ್ರಹಾರ ಕೃಷ್ಣಮೂರ್ತಿ, ಬೋಧನಹೊಸಹಳ್ಳಿ ಪ್ರಕಾಶ್, ಸಮೇತನಹಳ್ಳಿ ಗ್ರಾಪಂ ಸದಸ್ಯರಾದ ಮುನೇಶ್, ಅನಸೂಯ ಅರವಿಂದ್, ಮಂಜುನಾಥ್, ಗಿರೀಶ್, ಮಾಜಿ ಅಧ್ಯಕ್ಷ ಅಶೋಕ್, ಮಾಜಿ ಗ್ರಾಪಂ ಸದಸ್ಯ ಎನ್.ಟಿ.ವೆಂಕಟೇಶ್ಗೌಡ, ಜ್ಯೋತೀಶ್, ನಾಗೇಶ್, ಮುನಿರಾಜು, ಗಣೇಶ್, ಅಜಯ್ ಸಂಜಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.