ದೇವನಹಳ್ಳಿ: ಸಾಮಾಜಿಕ ಸೇವೆಗಳು ಮಾನವೀಯ ಮೌಲ್ಯವನ್ನು ವೃದ್ಧಿಸುತ್ತದೆ ಎಂದು ಜೇಸಿಐ ಸೆನೆಟರ್ ಜೆಫಿನ್ ಜಾಯ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜೇಸಿಐ ಸಂಸ್ಥೆ ವತಿಯಿಂದ ನಡೆದ ‘ಮಿಡ್ಕಾನ್ 2019 ಅದ್ಧೂರಿ ಸಂಭ್ರಮಿಸಿ ಮಿಂಚೋಣ’ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.
ಮನುಷ್ಯನ ಜೀವನವೆಲ್ಲ ಒತ್ತಡದಲ್ಲಿ ಕಳೆದು ಹೋಗುತ್ತಿದೆ. ಪ್ರೀತಿ, ವಿಶ್ವಾಸ, ಸ್ನೇಹ ಕಡಿಮೆಯಾಗಿ ಅಹಂಕಾರದ ಮನೋಭಾವ ಹೆಚ್ಚುತ್ತಿದೆ. ಮೋಜ ಮಸ್ತಿ ಎಂದರೆ ಕುಡಿತದ ಅಮಲು ಎಂಬ ಭಾವನೆ ಯುವ ಸಮುದಾಯದಲ್ಲಿ ಬೇರೂರಿದೆ. ಸಾಮಾಜಿಕ ಕಳಕಳಿ ಮರೆಯಾಗಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡರೆ ಇದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.
ಮುಖಂಡ ಪಿಳ್ಳಮುನಿಶಾಮಪ್ಪ ಮಾತನಾಡಿ, ‘ಸಂಘಟನೆಗಳು ಸಾಮೂಹಿಕವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಒಂದು ವರ್ಷದ ನಂತರ ಅಂಬೇಡ್ಕರ್ ಭವನ ನೋಡಿದಾಗ ಬೇಸರವಾಗುತ್ತದೆ. ಅನೇಕ ದಲಿತರ ಮುಖಂಡರು ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ತನಿಖೆ ನಡೆಸಿ ವಾಸ್ತವ ತಿಳಿಸಲಿ; ಅದಕ್ಕೆ ತಲೆಬಾಗುತ್ತೇನೆ’ ಎಂದು ಹೇಳಿದರು.
ಜೇಸಿಐ ವಲಯ ಉಪಾಧ್ಯಕ್ಷ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು ಜೆಸಿಐ ಮುಖ್ಯಸ್ಥರಾದ ವಿಕಾಸ್ ಗೋಗ್ಲಿಯ, ಸೋಮೇಶ್, ಲೋಹಿತ್, ಬಾಲವೆಂದಲ್, ದೇವನಹಳ್ಳಿ ಜೇಸಿಐ ಸಂಸ್ಥೆ ಅಧ್ಯಕ್ಷ ಅರವಿಂದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.